
ಮುದಗಲ್ (ರಾಯಚೂರು ಜಿಲ್ಲೆ): ಲಿಂಗಸುಗೂರು ತಾಲ್ಲೂಕಿನ ಮಟ್ಟೂರು ತಾಂಡಾಕ್ಕೆ ಪ್ರಕರಣ ಸಂಬಂಧ ಆರೋಪಿಗಳ ವಿಚಾರಣೆಗೆ ಮಂಗಳವಾರ ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಲಾಗಿದೆ.
ಮಟ್ಟೂರು ತಾಂಡಾದಲ್ಲಿ ಹಳೆಯ ವೈಷ್ಯಮ್ಯದಿಂದ ಕೆಲವು ದಿನಗಳ ಹಿಂದೆ ಮಲ್ಲಪ್ಪ ಚವ್ಹಾಣ್ ಹಾಗೂ ರಾಮಪ್ಪ ಜಾಧವ ಕುಟುಂಬದ ಮಧ್ಯೆ ಜಗಳವಾಗಿತ್ತು. ಮಲ್ಲಪ್ಪ ಚವ್ಹಾಣ್ ಅವರು ಮುದಗಲ್ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು.
ಮಲ್ಲಪ್ಪ ನೀಡಿದ ದೂರಿನ ಮೇರೆ ಆರೋಪಿ ರಾಮಪ್ಪ ಹಾಗೂ ಆತನ ಪತ್ನಿ ಸಕ್ಕುಬಾಯಿ ಅವರ ವಿಚಾರಣೆಗೆ ಎಎಸ್ಐ ವೆಂಕಟಪ್ಪ ನಾಯಕ, ಹೆಡ್ಕಾನ್ಸ್ಟೆಬಲ್ ರಾಮಪ್ಪ ಅವರು ತಾಂಡಾಕ್ಕೆ ತೆರಳಿದ್ದರು. ಇದೇ ವೇಳೆ ರಾಮಪ್ಪ ಹಾಗೂ ಪತ್ನಿ ಸಕ್ಕುಬಾಯಿ ಸೇರಿಕೊಂಡು ಕಲ್ಲು, ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಸಮವಸ್ತ್ರ ಹಿಡಿದು ಎಎಸ್ಐ ಅವರನ್ನು ಎಳೆದಾಡಿ ಗಾಯಗೊಳಿಸಿದ್ದಾರೆ.
ಪೊಲೀಸರು ಮೊಬೈಲ್ನಲ್ಲಿ ದೃಶ್ಯ ಸೆರೆಗೆ ಯತ್ನಿಸಿದಾಗ ಮೊಬೈಲ್ ಕಸಿದು ನೆಲಕ್ಕೆ ಎಸೆದಿದ್ದಾರೆ. ವಿಷಯ ತಿಳಿದ ಪಿಎಸ್ಐ ವೆಂಕಟೇಶ ಮಾಡಗೇರಿ ಸ್ಥಳಕ್ಕೆ ಭೇಟಿ ನೀಡಿದಾಗ ಅವರ ಮೇಲೂ ಹಲ್ಲೆ ಮಾಡಿದ್ದಾರೆ. ಗಾಯಗೊಂಡ ಪಿಎಸ್ಐ ಹಾಗೂ ಎಎಸ್ಐ ಲಿಂಗಸುಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಪ್ರಕರಣ ದಾಖಲಿಸಿದ್ದು, ಕಾನೂನು ಕ್ರಮ ತಗೆದುಕೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.