ರಾಯಚೂರು: ಜಿಲ್ಲೆಯ ವಿವಿಧೆಡೆ ನಾಗರ ಪಂಚಮಿ ದಿನದಂದು ಶನಿವಾರ ಸಂಪ್ರದಾಯ ಪಾಲನೆಗಾಗಿ ಮಾತ್ರ ಪೂಜೆ, ಪುನಸ್ಕಾರಗಳು ನೆರವೇರಿದವು. ಕೋವಿಡ್ ಸೋಂಕು ಇರುವ ಕಾರಣದಿಂದಾಗಿ ಪ್ರತಿವರ್ಷ ಕಾಣುತ್ತಿದ್ದ ಸಂಭ್ರಮ ಮರೆಯಾಗಿರುವುದು ಕಂಡುಬಂತು.
ಕುಟುಂಬದ ಸದಸ್ಯರು ಮಾತ್ರ ಗುಂಪುಗಳಲ್ಲಿ ಆಗಮಿಸಿ ಪೂಜೆ ನೆರವೇರಿಸುತ್ತಿರುವುದು ಸಾಮಾನ್ಯವಾಗಿತ್ತು. ಕೋವಿಡ್ ಸೋಂಕು ತಡೆ ಮುನ್ನಚ್ಚರಿಕೆ ಇರುವುದರಿಂದ ಮಹಿಳೆಯರು ಒಟ್ಟಾಗಿ ಸೇರುವುದು, ಪರಸ್ಪರ ಕುಶಲೋಪರಿ ವಿಚಾರಿಸುತ್ತಿರುವುದು ಕಂಡು ಬರಲಿಲ್ಲ.ಒಂದೇ ಕುಟುಂಬಕ್ಕೆ ಸೇರಿದ ಮಹಿಳೆಯರು ಮಾತ್ರ ಒಟ್ಟಾಗಿ ಬಂದು ನಾಗದೇವರಿಗೆ ಪೂಜೆ ಸಲ್ಲಿಸುತ್ತಿರುವುದು ಕಂಡುಬಂತು. ಎಂದಿನಂತೆ ದೇವಸ್ಥಾನಗಳಲ್ಲಿ ಭಕ್ತರ ಬರುವಿಕೆಗಾಗಿ ಪೂರ್ವ ತಯಾರಿ ಮಾಡಲಾಗಿತ್ತು.
ನಾಗರಕಟ್ಟೆಗಳಿಗೆ ತೆರಳಿ ಸಾಮೂಹಿಕವಾಗಿ ಪೂಜೆ ಸಲ್ಲಿಸಿದರೂ ಪರಸ್ಪರ ಅಂತರ ಕಾಪಾಡುವುದು ಎದ್ದು ಕಾಣುತ್ತಿತ್ತು.ಕೋವಿಡ್ ಸೋಂಕು ಈ ವರ್ಷ ಪಂಚಮಿ ಸಂಭ್ರಮವನ್ನು ನುಂಗಿಹಾಕಿದೆ. ಪ್ರತಿವರ್ಷ ಪಂಚಮಿ ಹಬ್ಬದಲ್ಲಿ ಗಂಡನ ಮನೆಯಿಂದ ತವರು ಮನೆಗೆ ಮಹಿಳೆಯರು ಬರುತ್ತಿದ್ದರು. ಇದೇ ಮೊದಲ ಬಾರಿ ಕೋವಿಡ್ ಸೋಂಕು ಕಾರಣದಿಂದ ಎಲ್ಲವನ್ನು ಕೈಬಿಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.