ADVERTISEMENT

ಎನ್‌ಎಸ್‌ಎಸ್‌ನಿಂದ ಸಮಾಜಮುಖಿ ಸೇವೆ

ರಿಮ್ಸ್ ಆಸ್ಪತ್ರೆಯ ಮುಖ್ಯ ಆಡಳಿತ ಅಧಿಕಾರಿ ಮೆಹಬೂಬ್ ಜಿಲಾನಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 13:39 IST
Last Updated 14 ಆಗಸ್ಟ್ 2022, 13:39 IST
ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂಸೇವಕಿಯರು ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ (ರಿಮ್ಸ್‌) ಮಾರ್ಗದಲ್ಲಿ ಭಾನುವಾರ ಸ್ವಚ್ಛತಾ ಕಾರ್ಯ ಕೈಗೊಂಡರು.
ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂಸೇವಕಿಯರು ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ (ರಿಮ್ಸ್‌) ಮಾರ್ಗದಲ್ಲಿ ಭಾನುವಾರ ಸ್ವಚ್ಛತಾ ಕಾರ್ಯ ಕೈಗೊಂಡರು.   

ರಾಯಚೂರು: ರಾಷ್ಟೀಯ ಸೇವಾ ಯೋಜನೆ ಘಟಕ(ಎನ್‌ಎಸ್‌ಎಸ್‌)ದಲ್ಲಿರುವ ವಿದ್ಯಾರ್ಥಿನಿ ಸ್ವಯಂಸೇವಕಿಯರು ಸಮಾಜ ಹಾಗೂ ರಾಷ್ಟ್ರದ ಪ್ರಗತಿಗಾಗಿ ವಹಿಸುವ ನಿಸ್ವಾರ್ಥ ಮತ್ತು ಸಮಾಜಮುಖಿ ಸೇವೆ ಮಾದರಿಯಾಗಿದೆ ಎಂದು ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯ ಮುಖ್ಯ ಆಡಳಿತ ಅಧಿಕಾರಿಗಳಾದ ಶ್ರೀ ಮೆಹಬೂಬ್ ಜಿಲಾನಿ ಅವರು ಹೇಳಿದರು.

ಅಜಾದಿ ಕಾ ಅಮೃತ್‌ ಮಹೋತ್ಸವದ ಅಂಗವಾಗಿ ಎನ್‌ಎಸ್‌ಎಸ್‌ ಪ್ರಾದೇಶಿಕ ನಿರ್ದೇಶನಾಲಯ, ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆ, ರಾಯಚೂರು ವಿಶ್ವವಿದ್ಯಾನಿಲಯ, ಎಸ್ಎಸ್ಎಂ ಪದವಿ ಮಹಾವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯಿಂದ ಭಾನುವಾರ ಕೈಗೊಂಡಿದ್ದ ರಾಯಚೂರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂಸೇವಕಿಯರು ಕೈಗೊಂಡ ಸ್ವಚ್ಛತಾ ಕಾರ್ಯಗಳನ್ನು ವೀಕ್ಷಿಸಿ ಮಾತನಾಡಿದರು.

ಸಮಾಜದಲ್ಲಿ ಪರಿವರ್ತನೆ ಎಂಬುದು ಅತ್ಯಂತ ಅಗತ್ಯವಾಗಿದೆ. ವ್ಯವಸ್ಥೆಗಳ ಬದಲಾವಣೆ ಹಾಗೂ ಸುಧಾರಣೆಗೆ ಆಯಾ ಕಾಲಕ್ಕೆ ತಕ್ಕಂತೆ ಶ್ರಮವಹಿಸಿ ಕಾರ್ಯಗಳನ್ನು ಕೈಗೊಳ್ಳುವುದು ಮತ್ತು ಅಪೇಕ್ಷಿತ ಬದಲಾವಣೆಗಳನ್ನು ತರುವುದು ಸಮಯದ ಅವಶ್ಯಕತೆಯಾಗಿದೆ. ಸಾಮಾಜಿಕ ಹಾಗೂ ರಾಷ್ಟ್ರೀಯ ಅಭಿವೃದ್ಧಿಗಾಗಿ ಅಗತ್ಯ ಕಾರ್ಯಗಳನ್ನು ಕೈಗೊಂಡು ಅದರ ಸುಸ್ಥಿರ ಬೆಳವಣಿಗೆಗೆ ಕಾರಣವಾಗುವಂತಹ ಪರಿಣಾಮಕಾರಿ ಕಾರ್ಯಗಳನ್ನು ಕೈಗೊಳ್ಳುವುದು ಅಗತ್ಯವಿದೆ ಎಂದರು.

ADVERTISEMENT

ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿಯಾದ ಡಾ. ಸಂತೋಷಕುಮಾರ ರೇವೂರ್ ಮಾತನಾಡಿ, ನಗರದ ರೀಮ್ಸ್ ಆಸ್ಪತ್ರೆಯ ಆವರಣ, ಜಿಲ್ಲಾ ಕ್ರೀಡಾಂಗಣ ಮತ್ತು ಕೋಟೆಯ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವ ಗುರಿಯನ್ನು ಹೊಂದಲಾಗಿದ್ದು ಅದರಲ್ಲಿ ರಿಮ್ಸ್ ಬೋಧಕ ಆಸ್ಪತ್ರೆಯ ಆವರಣದಲ್ಲಿ ಕೈಗೊಂಡ ಸ್ವಚ್ಛತಾ ಕಾರ್ಯಗಳು ಮನಸ್ಸಿಗೆ ತೃಪ್ತಿಯನ್ನು ತಂದಿವೆ. ವಿದ್ಯಾರ್ಥಿನಿ ಸ್ವಯಂಸೇವಕಿಯರು ತಮ್ಮ ದಿನನಿತ್ಯದ ವಿದ್ಯಾರ್ಜನೆಯೊಂದಿಗೆ ಬಿಡುವಿನ ಸಮಯದಲ್ಲಿ ಸಮಾಜ ಹಾಗು ರಾಷ್ಟ್ರಮುಖಿ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಇತರರಿಗೆ ಮಾದರಿಯಾಗಬಲ್ಲ ಪ್ರೇರಣಾತ್ಮಕ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ತಮ್ಮ ಶ್ರಮವನ್ನು ಸೇವೆಯ ರೂಪದಲ್ಲಿ ವ್ಯಕ್ತಪಡಿಸಿರುವುದು ಶ್ರೇಷ್ಠ ಕಾರ್ಯವಾಗಿದೆ ಎಂದು ಹೇಳಿದರು.

ಶ್ರಮದಾನ ಕಾರ್ಯಕ್ರಮದುದ್ದಕ್ಕೂ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯ ಪ್ರಾಂಶುಪಾಲರು, ದೈಹಿಕ ಶಿಕ್ಷಣ ನಿರ್ದೇಶಕರು, ಡೀನಗಳು ಸೇರಿದಂತೆ ಅಧಿಕಾರಿಗಳ ವರ್ಗ ಮತ್ತು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.