ADVERTISEMENT

ವಿಡಿಯೊ ಸ್ಟೋರಿ | ರಾಯಚೂರಿನಲ್ಲಿ ಹಣ್ಣು ಮಾರುವ ಅಜ್ಜಿಯ ಅತಂತ್ರ ಸ್ಥಿತಿ

ನಾಗರಾಜ ಚಿನಗುಂಡಿ
Published 25 ಮಾರ್ಚ್ 2020, 9:23 IST
Last Updated 25 ಮಾರ್ಚ್ 2020, 9:23 IST
ರಾಯಚೂರಿನಲ್ಲಿ ಹಣ್ಣು ಮಾರುವ ನರಸಮ್ಮ ಅಜ್ಜಿ
ರಾಯಚೂರಿನಲ್ಲಿ ಹಣ್ಣು ಮಾರುವ ನರಸಮ್ಮ ಅಜ್ಜಿ   

ರಾಯಚೂರು: ನಗರದಲ್ಲಿ ಹಣ್ಣುಗಳನ್ನು ಸಗಟು ಖರೀದಿಸಿ ಬೀದಿಬದಿ ಮಾರಾಟ ಮಾಡುತ್ತಿದ್ದ ತಾಲ್ಲೂಕಿನ ಯರಗೇರಾದ ಅಜ್ಜಿ ನರಸಮ್ಮ ಅತಂತ್ರ ಸ್ಥಿತಿಗೆ ಸಿಲುಕಿ ಕಣ್ಣೀರು ಹಾಕುತ್ತಿದ್ದಾರೆ.

ಪ್ರತಿದಿನ ಹಣ್ಣು ಮಾರಾಟ ಮಾಡಿ, ಉಳಿದಿದನ್ನು ನಗರಸಭೆ ಎದುರು ತಹಶೀಲ್ದಾರ್ ಕಚೇರಿ ಪಕ್ಕದ ಮಳಿಗೆಯೊಂದರಲ್ಲಿ ಇಟ್ಟು ಹೋಗುತ್ತಿದ್ದರು. ಇದಕ್ಕಾಗಿ ಮಳಿಗೆದಾರನಿಗೆ ಬಾಡಿಗೆ ಕೊಡುತ್ತಿದ್ದರು.

ಸೋಮವಾರ ರಾತ್ರಿಯಿಂದ ಯರಗೇರಾದತ್ತ ಹೋಗುವುದಕ್ಕೆ ಯಾವುದೇ ವಾಹನ ಸಿಕ್ಕಿಲ್ಲ. ಹನುಮಾನ ಟಾಕೀಸ್ ಹತ್ತಿರದ ಪರಿಚಯಸ್ಥರ ಮನೆಯಲ್ಲಿ ಎರಡು ದಿನ ಉಳಿದುಕೊಂಡಿದ್ದರು. ಇದೀಗ ಅವರು ಮನೆಯಿಂದ ಹೋಗುವಂತೆ ಹೊರಗೆ ಕಳುಹಿಸಿದ್ದಾರೆ.

ADVERTISEMENT

'ಎಂಟು ಸಾವಿರ ಕಿಮ್ಮತ್ತಿನ ಹಣ್ಣು ಅಂಗಡಿಯಲ್ಲಿದೆ. ಅಂಗಡಿ ತೆರೆದು ಹಣ್ಣುಗಳನ್ನು ಕೊಡುತ್ತಿಲ್ಲ. ಊರಿಗೆ ಹೋಗುವುದಕ್ಕೆ ಪೊಲೀಸರು ಬಿಡುತ್ತಿಲ್ಲ. ಏನೂ ಗೊತ್ತಾಗವಲ್ದು. ಬಂದ್ ಹೀಂಗ್ ಇರತೈತಿ ಅಂತನನಗ ಗೊತ್ತಿರಲಿಲ್ಲ' ಎಂದು ಅಸಹಾಯಕತೆಯಿಂದ ಅಳುತ್ತಾ ನಗರಸಭೆ ಎದುರಿನ ಮಳಿಗೆ ಬಳಿ ಕುಳಿತಿದ್ದಾರೆ.

ನರಸಮ್ಮನಿಗೆ ಒಬ್ಬರು ಮಗ ಇದ್ದು, ಯರಗೇರಾದಲ್ಲಿ ಗೌಂಡಿ ಕೆಲಸ ಮಾಡುತ್ತಾರೆ. ಅವರ ಬಳಿ ಮೊಬೈಲ್ ಇಲ್ಲವಂತೆ. ಮಳಿಗೆಯಲ್ಲಿರುವ ಹಣ್ಣುಗಳ ಮೂಟೆ ಕೊಡಿಸಿ, ಯರಗೇರಾಗೆ ಹೋಗುವ ವ್ಯವಸ್ಥೆ ಮಾಡಿ ಎಂದು ಕೈಮುಗಿದು ಕೇಳಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.