ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಕಂಪೆನಿಯ ಮಲ್ಲಪ್ಪ ಶಾಫ್ಟ್ 15ನೇ ಹಂತ 1500 ಅಡಿ ಆಳದಲ್ಲಿ ಗಣಿ ಕುಸಿತವಾಗಿ ಒಬ್ಬರು ಕಾರ್ಮಿಕ ಮೃತಪಟ್ಟಿದ್ದು, ಹಲವರು ಗಾಯಗೊಂಡಘಟನೆ ಭಾನುವಾರ ಬೆಳಗಿನ ಪಾಳಿ ಕೆಲಸದ ವೇಳೆ ನಡೆದಿದೆ.
ಲಿಂಗಸುಗೂರು ತಾಲ್ಲೂಕಿನ ಆನ್ವರಿ ಗ್ರಾಮದ ದಾವಲಸಾಬ್ ಎಂ.ಡಿ. ಹುಸೇನ್ (44) ಮೃತಪಟ್ಟಿದ್ದಾರೆ. ಗಣಿಯ ಕಲ್ಲುಗಳು ಬಿದ್ದು ಎದೆ, ಕೈ ಹಾಗೂ ಕಾಲುಗಳ ಒಳಭಾಗದಲ್ಲಿ ಪೆಟ್ಟುಗಳಾಗಿ ಮೃತಪಟ್ಟಿದ್ದಾರೆ. ಗಾಯಗೊಂಡವರಿಗೆ ಕಂಪೆನಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕೂಡಲೇ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಆರಂಭಿಸಿದ ಕಾರ್ಮಿಕರು ‘ಗಣಿಯಲ್ಲಿ ಸುರಕ್ಷತೆ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆ ಸರಿಪಡಿಸಬೇಕು ಹಾಗೂ ಕಾರ್ಮಿಕನ ಕುಟುಂಬಕ್ಕೆ ತಕ್ಷಣ ಉದ್ಯೋಗ ಮತ್ತು ಪರಿಹಾರ ಒದಗಿಸುವಂತೆ ಒತ್ತಾಯಿಸಿದರು.
ಸ್ಥಳಕ್ಕೆ ಧಾವಿಸಿದ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸಂಗೂರ ಮಠ ಅವರು,ಮೃತ ಕಾರ್ಮಿಕನ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ಮತ್ತು ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.