ಜಾಲಹಳ್ಳಿ: ಮಂಗಳವಾರ ರಾತ್ರಿ ಸುರಿದ ಮಳೆ ಹಾಗೂ ಬೀಸಿದ ಗಾಳಿಗೆ ಭತ್ತದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ.
ನಾರಾಯಣಪುರ ಬಲದಂಡೆ ಕಾಲುವೆ ಮೂಲಕ ಜಾಲಹಳ್ಳಿ ಹೋಬಳಿ ವ್ಯಾಪ್ತಿಯ ಸುಮಾರು 50 ಗ್ರಾಮಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯಲಾಗುತ್ತಿದೆ. ನ.23 ರಂದು ರಾತ್ರಿ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಗೆ ಕಾಟವು ಹಂತಕ್ಕೆ ಬಂದಿರುವ ಭತ್ತದ ಬೆಳೆ ಸಂಪೂರ್ಣವಾಗಿ ನಷ್ಟವಾಗಿದೆ.
ತಹಶೀಲ್ದಾರ್ ಶ್ರೀನಿವಾಸ ಚಂಪಾಲ್ ಬುಧವಾರ ಕರಡಿಗುಡ್ಡ ಗ್ರಾ.ಪಂ ವ್ಯಾಪ್ತಿಯ ಮೇದಿನಪುರ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ಹಾನಿಯದ ಬೆಳೆ ಪರಿಶೀಲನೆ ನಡೆಸಿದರು. ರೈತರು ಬೆಳೆ ನಷ್ಟದ ಮಾಹಿತಿ ನೀಡಿದರು.
ರೈತರಾದ ಬಸನಗೌಡ, ಅಯ್ಯಣ, ರವಿ ಕುಮಾರ, ಸೂಗಪ್ಪ ಸೇರಿದಂತೆ ಅನೇಕರು ಮಾತನಾಡಿ, ಈಗಾಗಲೇ ಪ್ರತಿ ಎಕರೆಗೆ ಭತ್ತ ಬೆಳೆಯಲು ₹ 20 ಸಾವಿರ ವೆಚ್ಚ ಮಾಡಲಾಗಿದೆ. ಉಳಿದಂತೆ ಕೆಲವರು ರಸಗೋಬ್ಬರ, ಕ್ರಿಮಿನಾಶಕ ಸಿಂಪಡಣೆಗೆ ಸಾಲ ಮಾಡಿ ತರಲಾಗಿದೆ. ಅವರಿಗೆ ಏನು ಕೂಡಬೇಕು. ಜಮೀನು ಮಾರಾಟ ಮಾಡುವುದು ಅಥವಾ ಗುಳೆ ಹೋಗುವುದು ಈ ಭಾಗದಲ್ಲಿ ಸಾಮನ್ಯವಾಗಿದೆ ಎಂದು ಅಳಲು ತೋಡಿಕೊಂಡರು.
ನಂತರ ತಹಶೀಲ್ದಾರ್ ಶ್ರೀನಿವಾಸ ಚಂಪಾಲ್ ಮಾತನಾಡಿ, ‘ಜಾಲಹಳ್ಳಿ ಹಾಗೂ ಗಲಗ ಜಿ.ಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಮುಂದಿನ 10 ದಿನಗಳಲ್ಲಿಯೇ ಕಟಾವು ಮಾಡಬಹುದಾಗಿದ್ದ ಭತ್ತ ನೀರಿನಲ್ಲಿ ಬಿದ್ದು ಹೋಗಿದೆ. ತಕ್ಷಣವೇ ಗ್ರಾಮ ಲೆಕ್ಕಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ ನಷ್ಟದ ಬಗ್ಗೆ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕಂದಾಯ ನಿರೀಕ್ಷಕ ವಿಕಾಶ ಕುಮಾರ ಕೊಳ್ಳುರು ಸೇರಿದಂತೆ ರೈತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.