ADVERTISEMENT

‘ಮೂಢ ನಂಬಿಕೆಗಳಿಂದ ಬದುಕು ದುಸ್ತರ’

ಬಸವಶ್ರೀ ಶಾಲೆಯಲ್ಲಿ ಬಸವ ಪಂಚಮಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 13:51 IST
Last Updated 8 ಆಗಸ್ಟ್ 2019, 13:51 IST
ರಾಯಚೂರಿನಲ್ಲಿ ಈಚೆಗೆ ಆಯೋಜಿಸಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಯುವ ಸಾಹಿತಿ ಈರಣ್ಣ ಬೆಂಗಾಲಿ ಮಾತನಾಡಿದರು.
ರಾಯಚೂರಿನಲ್ಲಿ ಈಚೆಗೆ ಆಯೋಜಿಸಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಯುವ ಸಾಹಿತಿ ಈರಣ್ಣ ಬೆಂಗಾಲಿ ಮಾತನಾಡಿದರು.   

ರಾಯಚೂರು: ಆದಿ ಮಾನವನ ಕಾಲದಿಂದ ಮೂಢ ನಂಬಿಕೆಗಳನ್ನು ನಂಬಲಾಗುತ್ತಿದ್ದು, ಇದರಿಂದ ಬದುಕು ದುಸ್ತರವಾಗುತ್ತಿದೆ ಎಂದು ಯುವ ಸಾಹಿತಿ ಈರಣ್ಣ ಬೆಂಗಾಲಿ ಹೇಳಿದರು.

ಸುಗುಣ ಶಿಕ್ಷಣ ಸಂಸ್ಥೆಯ ಬಸವಶ್ರೀ ಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ಬಸವ ಪಂಚಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ, ತಂತ್ರಜ್ಞಾನ ಯುಗದಲ್ಲೂ ಮೂಢ ನಂಬಿಕೆಗಳು ಜೀವನದಲ್ಲಿ ಹಾಸುಹೊಕ್ಕಾಗಿವೆ. ಇದು, ಜೀವನದ ಏರುಪೇರಿಗೆ ಕಾರಣವಾಗಿದೆ. ಆದ್ದರಿಂದ ಅಂಧಶ್ರದ್ಧೆ ಆಚರಣೆ ಕೈಬಿಟ್ಟು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ADVERTISEMENT

12ನೇ ಶತಮಾನದ ವಚನಕಾರರು ವಚನಗಳ ಮೂಲಕ ಮೂಢ ನಂಬಿಕೆ ಹೊಡೆದೂಡಿಸಿ ಸಮಾಜದ ಸುಧಾರಣೆಗೆ ಪ್ರಯತ್ನಿಸಿದ್ದರು. ಶರಣರ ಮಾರ್ಗದಲ್ಲಿ ವಿದ್ಯಾರ್ಥಿಗಳು ನಡೆದು, ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು. ಯಾವುದೇ ವಿಷಯವನ್ನು ಪೂರ್ವಾಪರ ಅರಿಯದೇ ಒಪ್ಪಿಕೊಳ್ಳಬಾರದು ಎಂದು ತಿಳಿಸಿದರು.

ಮೂಢನಂಬಿಕೆ ಮತ್ತು ವಿಜ್ಞಾನದ ಕುರಿತು ಮುಖ್ಯ ಅತಿಥಿ ಸುರೇಶ್ ಮಾತನಾಡಿ, ನಿತ್ಯದ ಜೀವನದಲ್ಲಿ ವಿಜ್ಞಾನ ಹಾಸುಹೊಕ್ಕಾಗಿದೆ. ವಿಜ್ಞಾನ ಬಾಳಿಗೆ ಬೆಳಕು ನೀಡಲಿದ್ದು, ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಂಡು ಕಾಯಕದಲ್ಲಿ ವಿಶ್ವಾಸವಿಟ್ಟು ಮುನ್ನಡೆದರೆ ಒಳಿತಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಚನ ಸಾಹಿತಿ ರಾಮಸ್ವಾಮಿ ನೂಲಿ ಮಾತನಾಡಿ, ಮನಸ್ಸು ಶುದ್ಧವಾಗಿಸುವುದರೊಂದಿಗೆ ಪಂಚೇಂದ್ರಿಯಗಳಲ್ಲಿ ತುಂಬಿಕೊಂಡಿರುವ ಮಲೀನ ಸ್ವಚ್ಚಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಸಂಸ್ಥಾಪಕಿ ಎಂ.ಲಲಿತಾ ಪ್ರಾಸ್ತಾವಿಕ ಮಾತನಾಡಿ, ಪ್ರತೀ ಪಂಚಮಿ ಕಾರ್ಯಕ್ರಮದಲ್ಲಿ ಅಂಧ ಮಕ್ಕಳಿಗೆ, ಅನಾಥರಿಗೆ ಹಾಗೂ ಬಡವರಿಗೆ ಹಾಲು ವಿತರಣೆ ಮಾಡುವ ಮೂಲಕ ವೈಚಾರಿಕತೆ ಅಳವಡಿಕೊಳ್ಳಲಾಗಿದೆ. ಪ್ರತಿ ತಿಂಗಳು ವಚನ ಸಿಂಚನ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.

ವಿಜಯಲಕ್ಷ್ಮೀ ಸ್ವಾಗತಿಸಿದರು. ಮಲ್ಲಣ್ಣ ವಂದಿಸಿದರು. ವಿರೂಪಾಕ್ಷಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.