ADVERTISEMENT

ಗಬ್ಬೂರು ತಾಲ್ಲೂಕು ಕೇಂದ್ರ ಘೋಷಿಸಿ

ತಾಲ್ಲೂಕು ಹೋರಾಟ ಸಮಿತಿ ಪದಾಧಿಕಾರಿಗಳಿಂದ ಪ್ರತಿಭಟನೆ: ಮನವಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 10:50 IST
Last Updated 14 ಸೆಪ್ಟೆಂಬರ್ 2020, 10:50 IST
ದೇವದುರ್ಗ ತಾಲ್ಲೂಕಿನ ಗಬ್ಬೂರು ಹೋಬಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಮಧುರಾಜ ಅವರಿಗೆ ಹೋರಾಟ ಸಮಿತಿ ಮುಖಂಡರು ಸೋಮವಾರ ಮನವಿ ಪತ್ರ ಸಲ್ಲಿಸಿದರು
ದೇವದುರ್ಗ ತಾಲ್ಲೂಕಿನ ಗಬ್ಬೂರು ಹೋಬಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಮಧುರಾಜ ಅವರಿಗೆ ಹೋರಾಟ ಸಮಿತಿ ಮುಖಂಡರು ಸೋಮವಾರ ಮನವಿ ಪತ್ರ ಸಲ್ಲಿಸಿದರು   

ದೇವದುರ್ಗ: ಸರ್ಕಾರ ಅರಕೇರಾ ತಾಲ್ಲೂಕು ಕೇಂದ್ರ ಘೋಷಣೆ ಆದೇಶವನ್ನು ಮರು ಪರಿಶೀಲಿಸಬೇಕು. ತಾಲ್ಲೂಕಿನಲ್ಲಿಯೇ ದೊಡ್ಡ ಹೋಬಳಿ ಕೇಂದ್ರ ಎನಿಸಿಕೊಂಡಿರುವ ಗಬ್ಬೂರನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಗಬ್ಬೂರು ತಾಲ್ಲೂಕು ಹೋರಾಟ ಸಮಿತಿ ಪದಾಧಿಕಾರಿಗಳು ಗ್ರಾಮದ ನಾಡ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ರಾಮದುರ್ಗ, ಜಾಗೀರ ಜಾಡಲದಿನ್ನಿ ಮತ್ತು ಮಂದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಅರಕೇರಾಕ್ಕೆ ಸೇರ್ಪಡೆ ಮಾಡಲಾಗಿದೆ. ಈ ಗ್ರಾಮಗಳ ಜನ ನೂತನ ತಾಲ್ಲೂಕಿಗೆ ಸೇರ್ಪಡೆಯಾಗಲು ಒಪ್ಪುತ್ತಿಲ್ಲ. ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ, ತಮ್ಮ ಅಭಿಪ್ರಾಯವನ್ನು ಸಹ ಹೇಳಿದ್ದಾರೆ ಎಂದು ತಿಳಿಸಿದರು.

ದೇವದುರ್ಗದಿಂದ ಸುಮಾರು 40 ಕಿ.ಮೀ ದೂರದವರೆಗೂ ಗಡಿ ಗ್ರಾಮಗಳು ಬರುತ್ತವೆ. ಅವು ಅಭಿವೃದ್ಧಿಯಿಂದ ವಂಚಿತಗೊಂಡಿವೆ. ಗಬ್ಬೂರನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿದರೆ ಎಲ್ಲ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಆಗ್ರಹಿಸಿದರು.

ADVERTISEMENT

ತಹಶೀಲ್ದಾರ್ ಮಧುರಾಜ, ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರ ಸ್ವೀಕರಿಸಿ ಬೇಡಿಕೆಗಳನ್ನು ಕೂಡಲೇ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಸದಾಶಿವಯ್ಯ ತಾತ ಮಠದ, ಸಿದ್ದಯ್ಯ ತಾತ ಗುರುವಿನ, ಸೂಗೂರಪ್ಪಗೌಡ, ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಬೂದಯ್ಯ ಸ್ವಾಮಿ ಗಬ್ಬೂರು, ಕಾರ್ಯದರ್ಶಿ ಪ್ರಭಾಕರ್ ಪಾಟೀಲ ಇಂಗಳದಾಳ, ಶರಣಪ್ಪಗೌಡ ಕೊರವಿ, ಜೆಡಿಎಸ್ ಮುಖಂಡರಾದ ಬುಡ್ಡನಗೌಡ, ಕರೆಮ್ಮ ಗೋಪಾಲಕೃಷ್ಣ, ಶಾಂತಕುಮಾರ ಹೊನ್ನಟಿಗಿ, ರಾಜಪ್ಪ ಸಿರವಾರಕರ್, ಮರೆಪ್ಪ ಮಲದಕಲ್, ಚನ್ನಪ್ಪಗೌಡ ಖಾತ್ರಿಕಿ, ಹನುಮಂತಪ್ಪ ಕಾಕರಗಲ್ ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.