ಹಟ್ಟಿ ಚಿನ್ನದ ಗಣಿ: ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ಅಲಸಂದಿ ಬೆಳೆ ಕ್ಷೇತ್ರ ಹೆಚ್ಚಳವಾಗಿದೆ. ಅದರೊಂದಿಗೆ ಹಸಿರು ಹುಳು ಕಾಟವೂ ಹೆಚ್ಚಾಗಿದ್ದು ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ಬಹುತೇಕ ರೈತರು ಹೆಸರು ಬೆಳೆಯುವುದು ಸಾಮಾನ್ಯ. ಆದರೆ ಈ ಬಾರಿ ಕೆಲವರು ಅಲಸಂದಿ ಬೆಳೆಯುತ್ತಿದ್ದಾರೆ.
ಮೋಡ ಕವಿದ ವಾತವರಣದಿಂದ ಅಲಸಂದಿ ಬೆಳೆಗೆ ಹಸಿರು ಹುಳುಗಳ ಕಾಟ ಹೆಚ್ವಾಗಿದೆ. ಕೀಟ ನಾಶಕ ಸಿಂಪರಣೆ ಮಾಡಿದರೂ ಹತೋಟಿಗೆ ಬರುತ್ತಿಲ್ಲ ಎನ್ನುವುದು ರೈತರ ಅಳಲು.
‘ಅಲಸಂದಿಯನ್ನು ಪ್ರಮುಖ ಬೆಳೆಯನ್ನಾಗಿ ಬೆಳೆಯುವುದು ಕಡಿಮೆ. ಕಟಾವು, ಒಕ್ಕಣೆ ಸುಲಭ ಹಾಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಆದ್ದರಿಂದ ರೈತರು ಅಲಸಂದಿ ಬೆಳೆಯಲು ಆಸಕ್ತಿ ತೋರಿಸುತ್ತಿದ್ದಾರೆ. ಮುಂದಿನ ವರ್ಷ ಕ್ಷೇತ್ರ ವಿಸ್ತರಣೆ ಆಗುವ ಸಾಧ್ಯತೆ ಇದೆ’ ಎನ್ನುತ್ತಾರೆ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು.
ಪ್ರತಿ ಕ್ವಿಂಟಲ್ಗೆ ಗರಿಷ್ಠ ₹6,000–₹7,500ವರೆಗೆ ಬೆಲೆ ಸಿಗುತ್ತಿದೆ ಎನ್ನುತ್ತಾರೆ ರೈತರು.
ಅಲಸಂದಿ ಬುಡ್ಡಿ ದೊಡ್ಡದಾಗಿರುತ್ತವೆ, ಕಟಾವು ಸಲೀಸು. ಈ ಬೆಳೆ ಮೂಏ ತಿಂಗಳಿನಲ್ಲಿ ಬರುತ್ತದೆ. ಜಾನುವಾರಗಳಿಗೆ ಹೊಟ್ಟು ಸಿಗಲಿದೆ ಎಂದು ರೈತ ಅಂಬಣ್ಣ ತಿಳಿಸಿದರು.
ಬೆಳೆ ನಾಶವಾಗುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಲಿ ಎನ್ನುವುದು ರೈತರ ಒತ್ತಾಯ.
ಮಾರುಕಟ್ಟೆಯಲ್ಲಿ ಸುಧಾರಿತ ತಳಿಯ ಅಲಸಂದಿ ಬೀಜಗಳು ಲಭ್ಯವಿದೆ. ಹಸಿರು ಗೊಬ್ಬರ ಸಿಗಲಿದ್ದು ಫಲವತತ್ತೆ ಹೆಚ್ಚಲಿದೆ ಎನ್ನುತ್ತಾರೆ ಕೃಷಿ ತಜ್ಞರು.
ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದರಿಂದ ಹೆಚ್ಚಿನ ರೈತರು ಅಲಸಂದಿ ಬೆಳೆದಿದ್ದಾರೆ. ಹುಳು ಬಾಧೆ ತಗುಲಿದರೆ ರೈತ ಸಂಕರ್ಪ ಕಚೇರಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಿಹನುಮಂತ ರಾಠೋಡ್ ಕೃಷಿ ಅಧಿಕಾರಿ ಗುರುಗುಂಟಾ ಹೋಬಳಿ
ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ಈ ಬಾರಿ ಅಲಸಂದಿ ಬೆಳೆಯನ್ನು ರೈತರು ಬೆಳದಿದ್ದಾರೆ. ದ್ವಿದಳ ಧಾನ್ಯಗಳ ಮಾಹಿತಿ ಕೊರತೆ ಇದ್ದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಬೇಕುಶಿವರಾಜ ಮೋಟಗಿ ರೋಡಲಬಂಡ (ತವಗ) ಗ್ರಾಮದ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.