ಸಿಂಧನೂರು: ‘ಕಲಬುರಗಿ ಮತ್ತು ಧಾರವಾಡ ಹೈಕೋರ್ಟ್ ಪೀಠದ ಹಿರಿಯ ವಕೀಲ ಹಾಗೂ ಕರ್ನಾಟಕ ರಾಜ್ಯ ಬೇಡ ಜಂಗಮ ಸಮಾಜ ಒಕ್ಕೂಟದ ಅಧ್ಯಕ್ಷ ಬಿ.ಡಿ.ಹಿರೇಮಠ ಅವರ ಮುಂದಾಳತ್ವದಲ್ಲಿ ಬೇಡ ಜಂಗಮರ ಕುರಿತು ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ’ ಎಂದು ಅಖಿಲ ಕರ್ನಾಟಕ ರಾಜ್ಯ ಬೇಡ ಜಂಗಮ ಸಮಾಜದ ಸಂಘಟನಾ ಕಾರ್ಯದರ್ಶಿ ರವಿ ಹಿರೇಮಠ ತಿಳಿಸಿದ್ದಾರೆ.
ಶುಕ್ರವಾರ ಹೇಳಿಕೆ ನೀಡಿರುವ ಅವರು,‘ಬೇಡ ಜಂಗಮ ಸಮಾಜದ ಕುರಿತು ಬೀದರ್ನ ರವೀಂದ್ರ ಸ್ವಾಮಿ ಅವರ ಚುನಾವಣಾ ಅರ್ಜಿ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನ ಕುರಿತು ಅಖಿಲ ಕರ್ನಾಟಕ ರಾಜ್ಯ ಬೇಡ ಜಂಗಮ ಸಂಘಟನೆಯು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ತೀರ್ಪು ವ್ಯಕ್ತಿಗತ ವಿಚಾರಕ್ಕೆ ಮಾತ್ರ ಸೀಮಿತವಾಗಿದ್ದು, ಸಮಗ್ರ ಸಮಾಜದ ಮಾನ್ಯತೆಯ ಕುರಿತು ನೀಡಿದ ತೀರ್ಪು ಅಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘1901ರ ಸೆನ್ಸಸ್ ಆಫ್ ಇಂಡಿಯಾ ದಾಖಲೆಗಳಲ್ಲಿ ಬೇಡ ಜಂಗಮರನ್ನು ಕೆಳ ದರ್ಜೆಯ ಧಾರ್ಮಿಕ ಭಿಕ್ಷುಕರು ಎಂದು ಕರೆದು ಡಿಪ್ರೆಸ್ಡ್ ಕ್ಲಾಸಸ್ ಪಟ್ಟಿಯಲ್ಲಿನ 34 ಕೆಳ ದರ್ಜೆ ಜಾತಿಗಳ ಜೊತೆಗೆ ಜಂಗಮರನ್ನು ಸೇರಿಸಲಾಗಿದೆ’ ಎಂದು ಹೇಳಿದ್ದಾರೆ.
‘ಜಂಗಮರನ್ನು ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳಿಂದ ದೂರವಿರಿಸಿದ ಕಾರಣ ಅಧಿಕೃತವಾಗಿಯೇ ಭಾರತ ಸರ್ಕಾರ ಅಧಿನಿಯಮ-1935ರ ಪ್ರಕಾರ ಎಸ್.ಸಿ ಎಂದು ಪರಿಗಣಿಸಲಾಗಿದೆ. ಚಾರಿತ್ರಿಕ ದಾಖಲೆಗಳಿದ್ದರೂ ಎಸ್.ಸಿ ಮೀಸಲು ದುರ್ಬಳಕೆ ಎಂದು ತಪ್ಪು ಮಾಹಿತಿ ಹಬ್ಬಿಸುತ್ತಿರುವುದು ಖಂಡನೀಯ’ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.