
ರಾಯಚೂರು: ‘ಕಾವ್ಯವು ಸಮಾಜದಲ್ಲಿ ಮಾನವೀಯ ಮೌಲ್ಯ ಹಾಗೂ ಸೌಹಾರ್ದತೆಯನ್ನು ಬೆಳೆಸುವ ಬಲಿಷ್ಠ ಅಸ್ತ್ರವಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಅಭಿಪ್ರಾಯಪಟ್ಟರು.
ನಗರದ ಮಹಿಳಾ ಸಮಾಜ ಆವರಣದಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಪ್ರಯುಕ್ತ ಆಯೋಜಿಸಿದ್ದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
‘ರಾಯಚೂರು ಜಿಲ್ಲೆಯ ಕಾವ್ಯ ಪರಂಪರೆ ಅತ್ಯಂತ ಶ್ರೀಮಂತವಾಗಿದೆ. ಇತ್ತೀಚಿನ ದಿನಗಳಲ್ಲಿ ಹಿರಿಯರು, ಕಿರಿಯರು ತಮ್ಮ ಕಾವ್ಯ ಸೃಜನಶೀಲತೆಯ ಕಾವ್ಯದ ಮೂಲಕ ರಾಜ್ಯದ ಗಮನ ಸೆಳೆಯುತ್ತಿರುವುದು ಸಂತಸದ ಸಂಗತಿಯಾಗಿದೆ’ ಎಂದು ತಿಳಿಸಿದರು.
ಕವಿ ಗೋಷ್ಠಿಯಲ್ಲಿ 75 ಕವಿಗಳು ತಮ್ಮ ಕಾವ್ಯ ವಾಚನ ಮಾಡುವ ಮೂಲಕ ಎಡೆದೊರೆ ನಾಡು ರಾಯಚೂರು ಉತ್ಸವ ಸಾಹಿತ್ಯಿಕವಾಗಿ ಮತ್ತೊಂದು ಎತ್ತರವನ್ನು ತಲುಪಿಸುವ ಕಾರ್ಯ ಮಾಡಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಚಿದಾನಂದ ಸಾಲಿ ಮಾತನಾಡಿ, ‘ಗದ್ಯದಲ್ಲಿ ಬರೆದಿದ್ದನ್ನು, ಕತ್ತರಿಸಿ, ಪದಗಳನ್ನು ಜೋಡಿಸುತ್ತಹೋದರೆ ಅದು ಕವಿತೆ ಆಗುತ್ತದೆ ಎಂಬ ತಪ್ಪು ಗ್ರಹಿಕೆ ಕೆಲವರಲ್ಲಿದೆ. ಆದರೆ, ಗದ್ಯಕ್ಕೂ ಪದ್ಯಕ್ಕೂ ಇರುವ ಮುಖ್ಯ ವ್ಯತ್ಯಾಸವೆ ಕಾವ್ಯದ ಗುಣವಾಗಿದೆ‘ ಎಂದರು.
‘ಒಂದು ದೊಡ್ಡ ಜೀವನ ತತ್ವವನ್ನು ಸರಳವಾದ ಸಾಲುಗಳಲ್ಲಿ ಹೇಳುವವನೆ ನೀಜವಾದ ಕವಿ. ಅತ್ಯಂತ ಸಂಕೀರ್ಣ ಭಾಷೆ ಬಳಸಿ, ತಾನು ಹೇಳಬೇಕೆಂದುಕೊಂಡಿದ್ದನ್ನು ಕೇಳುವವರಿಗೆ ಕವನಗಳ ಮೂಲಕ ಹೇಳುವವನೆ ಕವಿ. ಜನ ಸಮೂಹದ ಧ್ವನಿ ಅಂತಲೂ ಕವಿಯನ್ನು ಕರೆಯುತ್ತಾರೆ. ಕವಿ, ಕವಿತೆಯ ಮೂಲಕ ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತಾನೆ. ಅದಕ್ಕಾಗಿ ಕವಿಯನ್ನು ಸಮಾಜದ ಅಘೋಷಿತ ಶಾಸಕ ಅಂತಲೂ ಕರೆಯಲಾಗುತ್ತದೆ‘ ಎಣದು ತಿಳಿಸಿದರು.
ಸಾಹಿತಿ ಗಿರಿರಾಜ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು.
ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಈರಣ್ಣ ಬಿರಾದಾರ, ಹಿರಿಯ ಸಾಹಿತಿಗಳಾದ ಬಿ.ಜಿ ಹುಲಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ವಿಜಯರಾಜೇಂದ್ರ, ಎಚ್.ಎಫ್. ಮಸ್ಕಿ, ಚುನಾವಣಾ ವಿಭಾಗದ ತಹಶೀಲ್ದಾರ್ ಪರಶುರಾಮ ಉಪಸ್ಥಿತರಿದ್ದರು.
ಅಣ್ಣಪ್ಪ ಮೇಟಿಗೌಡ ಹಾಗೂ ನಾಗಪ್ಪ ಹೊರಪ್ಯಾಟಿ ನಿರೂಪಿಸಿದರು. ರಾವುತ್ರಾವ್ ಬರೂರ ಸ್ವಾಗತಿಸಿದರು. ವಿಜಯಲಕ್ಷ್ಮಿ ಅಸ್ಕಿಹಾಳ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.