ಕವಿತಾಳ: ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಗ್ರಾಮದ ರೈತ ವೆಂಕಟೇಶ ಚೀಕಲಪರ್ವಿ ಅವರು ದಾಳಿಂಬೆ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.
ರಾಯಚೂರು ಲಿಂಗಸುಗೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಅವರ ದಾಳಿಂಬೆ ತೋಟ ನೋಡುಗರ ಕಣ್ಮನ ಸೆಳೆಯುತ್ತದೆ. 12 ಎಕರೆ ಪ್ರದೇಶದಲ್ಲಿ ಕಳೆದ ಆರು ವರ್ಷಗಳಿಂದ ದಾಳಿಂಬೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತ ವೆಂಕಟೇಶ ಚೀಕಲಪರ್ವಿ ಸಂಪೂರ್ಣ ತೋಟಗಾರಿಕೆ ಬೆಳೆಯತ್ತ ಗಮನ ಹರಿಸಿದ್ದಾರೆ.
ನೀರಿನ ಸೌಲಭ್ಯಕ್ಕಾಗಿ ನಾಲ್ಕು ಕೊಳವೆಬಾವಿಗಳನ್ನು ಕೊರೆಯಿಸಲಾಗಿದ್ದು, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ತಿಪ್ಪೆ ಗೊಬ್ಬರ, ಗೋಮೂತ್ರ, ಜೀವಾಮೃತ, ಎರೆಹುಳು ಗೊಬ್ಬರದ ಜೊತೆಗೆ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ಮಿತವಾಗಿ ಬಳಸುವ ಮೂಲಕ ಕಡಿಮೆ ಖರ್ಚಿನಲ್ಲಿ ಉತ್ತಮ ಬೆಳೆ ಬೆಳೆಯುವ ಕುರಿತು ಕೌಶಲ ಹೊಂದಿದ್ದಾರೆ.ಬೆಳೆಯ ಪೋಷಣೆಯ ಸಂಪೂರ್ಣ ಜವಾಬ್ದಾರಿಯನ್ನು ಅವರೇ ನಿರ್ವಹಿಸುತ್ತಿದ್ದಾರೆ.
ಕಳೆದ ವರ್ಷ ಅಂದಾಜು ₹ 32 ಲಕ್ಷ ಮೊತ್ತದ ದಾಳಿಂಬೆ ಬೆಳೆ ಬೆಳೆದಿರುವುದಾಗಿ ಹೇಳುವ ವೆಂಕಟೇಶ ಅವರು ಪ್ರಸಕ್ತ ಲಾಕ್ಡೌನ್ ಅವಧಿಯಲ್ಲಿ ಮಾರುಕಟ್ಟೆಗೆ ಹಣ್ಣುಗಳನ್ನು ಸಾಗಿಸಲು ಸಾಧ್ಯವಾಗದೆ ಮತ್ತು ಖರೀದಿದಾರರು ಸಿಗದೆ ಸ್ವಲ್ಪ ಮಟ್ಟಿನ ತೊಂದರೆಯಾದರೂ ಅಂದಾಜು ₹ 20 ಲಕ್ಷದ ಬೆಳೆ ಕೈಸೇರಿದೆ ಎನ್ನುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.