
ಸಿಂಧನೂರು: ‘ಆಸ್ತಿ ಹಂಚಿಕೆ ವಿಚಾರದಲ್ಲಿ ಪುತ್ರ ತಮಗೆ ನಿರಂತರ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ತಾವು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಬ್ಇನ್ಸ್ಪೆಕ್ಟರ್ ಮೌನೇಶ ರಾಠೋಡ್, ಎಎಸ್ಐ ಬಾಲಪ್ಪ ಮತ್ತು ಕಾನ್ಸ್ಟೆಬಲ್ಗಳು ರಕ್ಷಣೆ ನೀಡಿದ್ದಾರೆಯೇ ಹೊರೆತು ಯಾರ ಮೇಲೆಯೂ ದೌರ್ಜನ್ಯ ಮತ್ತು ಕಿರುಕುಳ ನಡೆಸಿಲ್ಲ. ಆದಾಗ್ಯೂ ನನ್ನ ಪುತ್ರ ಕೆ.ವೆಂಕಟೇಶ್ವರರಾವ್ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ರೈತ ಕೆ.ಕೃಷ್ಣಮೂರ್ತಿ ಸ್ಪಷ್ಟಪಡಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ನನ್ನ ಪುತ್ರ ವೆಂಕಟೇಶ್ವರರಾವ್ ಪಾಲಿನ ಜಮೀನು ಬಿಟ್ಟು ಉಳಿದ ಜಮೀನಿನಲ್ಲಿ ಬೆಳೆದಿದ್ದ ಭತ್ತವನ್ನು ಕಟಾವ್ ಮಾಡಿಕೊಂಡು ಬರಲಾಗಿದೆ. ಇದಕ್ಕೆ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ರಕ್ಷಣೆ ನೀಡಿದ್ದಾರೆ. ಎಕರೆಗೆ 20 ರಿಂದ 25 ಚೀಲ ಭತ್ತ ಬಂದಿದೆ. ಆದರೆ ನನ್ನ ಪುತ್ರ ವೆಂಕಟೇಶ್ವರರಾವ್ ವಿನಾಕಾರಣ ಪೊಲೀಸರ ವಿರುದ್ದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಆಸ್ತಿ ವಿಚಾರದಲ್ಲಿ ಕಾಕತೀಯ ಕ್ಲಬ್ನಲ್ಲಿ ಕಮ್ಮವಾರಿ ಸಂಘದ ಮುಖಂಡರ ನೇತೃತ್ವದಲ್ಲಿ ಪಂಚಾಯಿತಿ ನಡೆಸಲಾಗಿದ್ದರೂ ಕೆ.ವೆಂಕಟೇಶ್ವರರಾವ್ ಸಿವಿಲ್ ಕೇಸ್ ದಾಖಲಿಸಿರುವುದರಿಂದ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ’ ಎಂದರು.
ಸದ್ಯ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ಮನೆಯ ಕೆಳ ಮಹಡಿಯಲ್ಲಿ ಕೆ.ವೆಂಕಟೇಶ್ವರರಾವ್, ಎರಡನೇ ಮಹಡಿಯಲ್ಲಿ ನಾನು ವಾಸವಾಗಿದ್ದು, ನನ್ನನ್ನು ಹೊರಗೆ ಹೋಗುವಂತೆ ಹಲ್ಲೆ ಮತ್ತು ದೌರ್ಜನ್ಯ ಮಾಡಲಾಗುತ್ತಿದೆ. ಇದರ ವಿರುದ್ಧ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಗೆ ದೂರು ನೀಡಿದ್ದೇನೆ. ಕಾರಣ ತಮಗೆ ತಹಶೀಲ್ದಾರರು ಮತ್ತು ಜಿಲ್ಲಾಧಿಕಾರಿಗಳು ನ್ಯಾಯ ಒದಗಿಸಿ ಕೊಡಬೇಕು. ಇಲ್ಲದಿದ್ದರೆ ಧರಣಿ ಕೂರಬೇಕಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.