ರಾಯಚೂರು: ರೈತ, ಕೃಷಿ ವಿರೋಧಿ ನೀತಿ ವಿರೋಧಿಸಸಿ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಹೋರಾಟದ ಭಾಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ)ಯ ಪದಾಧಿಕಾರಿಗಳು ನಗರದ ಹೊರವಲಯದ ಬೈಪಾಸ್ ರಾಜ್ಯ ಹೆದ್ದಾರಿ ಸಂಚಾರ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.
ಇದರಿಂದ ಕೆಲಕಾಲ ಸಂಚಾರಕ್ಕೆ ವ್ಯತ್ಯಯವಾಯಿತು. ಆನಂತರ ಪೊಲೀಸರ ಮನ ಒಲಿಕೆಯಿಂದಾಗಿ ರೈತರು ಪ್ರತಿಭಟನೆಯನ್ನು ಹಿಂಪಡೆದರು. ಆನಂತರ ತಹಶೀಲ್ದಾರ್ ಡಾ.ಹಂಪಣ್ಣ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳ ವಿರೋಧಿಸಿ ಪಂಜಾಬ್, ಹರಿಯಾಣ, ರಾಜಸ್ಥಾನ ಹಾಗೂ ಉತ್ತರ ಪ್ರದೇಶ ರಾಜ್ಯಗಳ ರೈತರು ಹೆದ್ದಾರಿಗಳ ಮೂಲಕ ದೆಹಲಿ ಪ್ರವೇಶಿಸಿ ಹೋರಾಡಲು ಮುಂದಾಗಿದ್ದು, ಕೇಂದ್ರ ಸರ್ಕಾರಪೊಲೀಸರ ಪಡೆಯನ್ನು ಬಳಸಿ ನ್ಯಾಯ ಕೇಳಲು ಬಂದ ರೈತರ ಮೇಲೆ ಜಲಫಿರಂಗಿ, ಟಿಯರ್ ಗ್ಯಾಸ್ ದಾಳಿ ನಡೆಸಿ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕಾರ್ಪೊರೇಟ್ ಕಂಪನಿಗಳಿಗೆ ಹಳ್ಳಿಗಳನ್ನು ನೀಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಮಾರಕವಾಗಿರುವ ನೂತನ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆದುಕೊಳ್ಳಲು ರಾಷ್ಟ್ರಪತಿ ಅವರು ಕೇಂದ್ರಕ್ಕೆ ನಿರ್ದೇಶನ ನೀಡಬೇಕು. ರೈತರ ಮೇಲೆ ನಡೆಯುತ್ತಿರುವ ಶೋಷಣೆ ತಡೆಗಟ್ಟಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ, ಬಸವರಾಜ ಗೋಡಿಹಾಳ, ಉಮಾದೇವಿ ನಾಯಕ, ರವಿಕುಮಾರ, ರೂಪನಾಯಕ, ಬಸವರಾಜ, ಮಲ್ಲಿಕಾರ್ಜುನರೆಡ್ಡಿ, ಶಿವರಾಜ, ಹುಲಿಗಯ್ಯ, ರಂಗಪ್ಪ, ನರಸಪ್ಪ, ಶಿವಪುತ್ರಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.