ರಾಯಚೂರು: ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ ಹಾಗೂ ಬಡವರಪರ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಆವರಣದ ಬಳಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮೂಲಕ ಭೂ ಸುಧಾರಣೆ ಕಾಯ್ದೆಯಲ್ಲಿ ಇರುವ ರೈತ, ಕೃಷಿ ಕಾರ್ಮಿಕರ ಮತ್ತು ಭೂ ರೈತರ ಬಡ ಜನರ ಪರವಾದ ಆಶಯಗಳನ್ನು ನಾಶ ಮಾಡಲು ಮುಂದಾಗಿದೆ ಎಂದು ದೂರಿದರು. ಬಂಡವಾಳ ಶಾಹಿ ಮತ್ತು ಕಾರ್ಪೊರೇಟ್ ವಲಯಕ್ಕೆ ಅನುಕೂಲ ಮಾಡಿಕೊಡಲು ರಾಜ್ಯ ಸರ್ಕಾರ ಮುಂದಾಗಿದೆ.
ತಿದ್ದುಪಡಿ ಕ್ರಮವನ್ನು ಹಳ್ಳಿಗಾಡಿನ ಎಲ್ಲಾ ದುಡಿಯುವ ಜನರು ಒಟ್ಟಾಗಿ ಸೇರಿ ಪ್ರತಿರೋಧಿಸಬೇಕಾಗಿದೆ. ಇಲ್ಲದೇ ಹೋದಲ್ಲಿ ಬಂಡವಾಳ ಶಾಹಿಗಳ ಕಪ್ಪು ಹಣದ ಅಮಿಷಕ್ಕೆ ಸಿಲುಕಿ ತಮ್ಮ ನೆಲದಲ್ಲಿ ತಾವೇ ತಬ್ಬಲಿಗಳಾಗಬೇಕಾದ ದುಃಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.
ನೈಸರ್ಗಿಕ ಸಂಪನ್ಮೂಲವನ್ನು ಕೆಲವೇ ಕೆಲವು ಶ್ರೀಮಂತರು, ಬಂಡವಾಳ ಶಾಹಿಗಳ ಒಡೆತನಕ್ಕೆ ಒಪ್ಪಿಸುವುದು ಸಂವಿಧಾನದ ಆಶಯದ ಸಮಾನತೆ ತತ್ವಕ್ಕೆ ವಿರುದ್ಧವಾಗಿದೆ. ಕೂಡಲೇ ರಾಜ್ಯ ಸರ್ಕಾರವು ರೈತ ವಿರೋಧಿ ಆದೇಶಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಜೆ.ಬಿ.ರಾಜು, ರವೀಂದ್ರನಾಥ ಪಟ್ಟಿ, ಎಸ್.ಮಾರೆಪ್ಪ, ಎಂ.ಆರ್. ಭೇರಿ, ಎಂ.ಈರಣ್ಣ, ಎಂ.ವಸಂತಕುಮಾರ, ಹೇಮರಾಜ ಅಸ್ಕಿಹಾಳ, ಶಿವಜ್ಙಾನಿ ಕಪಗಲ್, ಪ್ರಭುಲಿಂಗ ಮ್ಯಾಗಳಮನಿ, ಚಿದಾನಂದ ಅರೋಲಿ, ಶರಣಪ್ಪ ದಿನ್ನಿ, ಪರಶುರಾಮ ಅರೋಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.