ADVERTISEMENT

ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಯುವ ಕಾಂಗ್ರೆಸ್‍, ಬ್ಲಾಕ್ ಕಾಂಗ್ರೆಸ್‌ ಮುಖಂಡರಿಂದ ಬೃಹತ್‌ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 7:57 IST
Last Updated 3 ಅಕ್ಟೋಬರ್ 2020, 7:57 IST
ಸಿಂಧನೂರಿನ ಯುವ ಕಾಂಗ್ರೆಸ್ ಹಾಗೂ ಕಿಸಾನ್ ಘಟಕದಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು
ಸಿಂಧನೂರಿನ ಯುವ ಕಾಂಗ್ರೆಸ್ ಹಾಗೂ ಕಿಸಾನ್ ಘಟಕದಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು   

ಸಿಂಧನೂರು: ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆಗಳನ್ನು ವಿರೋಧಿಸಿ ಇಲ್ಲಿನ ಯುವ ಕಾಂಗ್ರೆಸ್ ಹಾಗೂ ಕಿಸಾನ್ ಘಟಕ ಮತ್ತು ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಘಟಕಗಳು ಶುಕ್ರವಾರ ನಗರದಲ್ಲಿ ಪ್ರತ್ಯೇಕವಾಗಿ ಬೃಹತ್ ಪ್ರತಿಭಟನೆ ನಡೆಸಿದವು.

ಸ್ಥಳೀಯ ಎಪಿಎಂಸಿ ಗಣೇಶ ದೇವಸ್ಥಾನದ ಬಳಿ ನೂರಾರು ಕಾರ್ಯಕರ್ತರು, ಮಹಿಳೆಯರು ಜಮಾಯಿಸಿದ್ದರು. ನಂತರ ಆರಂಭಗೊಂಡ ಮೆರವಣಿಗೆಯು ಬಾಬುಜಗಜೀವನರಾಂ ವೃತ್ತ, ಬಸವೇಶ್ವರ ಸರ್ಕಲ್, ಬಸ್ ನಿಲ್ದಾಣ ರಸ್ತೆ, ಮಹಾತ್ಮ ಗಾಂಧಿ ವೃತ್ತಕ್ಕೆ ತಲುಪಿತು.

ಎತ್ತಿನ ಬಂಡಿಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ, ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ ಹಾಗೂ ಕಾರ್ಯಕರ್ತರು ಹಸಿರು ಶಾಲು ಬೀಸಿ ಸಂಚರಿಸಿದರು.

ADVERTISEMENT

ನಂತರ ಮಿನಿವಿಧಾನಸೌಧ ಕಚೇರಿಯ ಮುಂದೆ ಧರಣಿ ಕುಳಿತು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಭಿವೃದ್ದಿ ಶೂನ್ಯವಾಗಿದೆ. ಬದಲಿಗೆ ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುವ ಮೂಲಕ ದೇಶದ ಸಂಪತ್ತನ್ನು ಶ್ರೀಮಂತರಿಗೆ ಮತ್ತು ಕಾರ್ಪೋರೇಟ್ ಕಂಪನಿಗಳಿಗೆ ಲೂಟಿ ಹೊಡೆಯಲು ಅನುಕೂಲ ಕಲ್ಪಿಸುತ್ತಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ ದೂರಿದರು.

ತಹಶೀಲ್ದಾರ್ ಮಂಜುನಾಥ ಭೋಗಾವತಿ ಮನವಿ ಪತ್ರ ಸ್ವೀಕರಿಸಿದರು.

ಮುಖಂಡರಾದ ಸೋಮನಗೌಡ ಬಾದರ್ಲಿ, ವೆಂಕಟೇಶ ರಾಗಲಪರ್ವಿ, ಮಹಾದೇವ ಧುಮತಿ, ವೀರರಾಜು, ದ್ರಾಕ್ಷಾಯಿಣಿ, ಸುಜಾತಾ, ಚೆನ್ನಬಸವಸ್ವಾಮಿ, ಖಾಜಾಹುಸೇನ್ ರೌಡಕುಂದಾ, ಮಲ್ಲಯ್ಯ, ನಾಗರಾಜ ಕವಿತಾಳ, ಅಮರೇಶ ಬಾಗೋಡಿ, ನಾಗರಾಜ ಬಾದರ್ಲಿ, ಹುಸೇನಬಾಷಾ, ಹನುಮೇಶ ಬಾಗೋಡಿ, ಇಲಿಯಾಸ್ ಪಟೇಲ್, ಪ್ರಭು ದೇವರಗುಡಿ, ಮಯೂರ ಜವಳಗೇರಾ, ದವಲಸಾಬ, ಬಾಷಾ, ಹನುಮೇಶ ಜಾಲಿಹಾಳ, ಯೂನೂಸ್‍ಪಾಷಾ ದಢೇಸುಗೂರು, ಪ್ರಭು ದೇವರಗುಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.