ಸಿಂಧನೂರು: ಕನ್ನಡಿಗರಿಗೆ ಶೇ100 ರಷ್ಟು ಉದ್ಯೋಗಗಳನ್ನು ನೀಡುವ ಆದೇಶವನ್ನು ಹಿಂಪಡೆದ ಧೋರಣೆ ಖಂಡಿಸಿ ಹಾಗೂ ತಡೆಹಿಡಿದ ಮಸೂದೆಯನ್ನು ಶೀಘ್ರ ರಾಜ್ಯ ಸರ್ಕಾರ ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಎಚ್.ಶಿವರಾಮೇಗೌಡ ಬಣ) ತಾಲ್ಲೂಕು ಘಟಕ ಶುಕ್ರವಾರ ಸ್ಥಳೀಯ ಮಿನಿವಿಧಾನಸೌಧ ಮುಂದೆ ಪ್ರತಿಭಟಿಸಿ ಶಿರಸ್ತೇದಾರ್ ಅಂಬಾದಾಸ್ಗೆ ಮನವಿ ಪತ್ರ ಸಲ್ಲಿಸಿತು.
ಕನ್ನಡಿಗರ ಉದ್ಯೋಗಗಳ ವಿಷಯವಾಗಿ ಸರ್ಕಾರವು ಸಿ ಮತ್ತು ಡಿ ಹುದ್ದೆಗಳಿಗೆ ಶೇ.100 ರಷ್ಟು ಆದೇಶ ಹೊರಡಿಸಿತು. ಇದನ್ನು ವಿಧಾನಸಭೆಯಲ್ಲಿ ಅನುಮೋದಿಸಲಾಯಿತು. ಜಾರಿಗೆ ತರುವ ನಿಟ್ಟಿನಲ್ಲಿ ಆದೇಶವನ್ನು ಮಾಡಿತು. ಆದರೆ, ರಾಜ್ಯದಲ್ಲಿರುವ ಉದ್ಯಮಿಗಳ ಒತ್ತಡಕ್ಕೆ ಮಣಿದು ಜಾರಿಯಾದ ಮಸೂದೆ ಸರ್ಕಾರ ತಡೆಹಿಡಿದಿರುವುದು ಖಂಡನೀಯ. ಉದ್ದಿಮೆದಾರರು ಕರ್ನಾಟಕ ರಾಜ್ಯದ ಎಲ್ಲ ಸವಲತ್ತುಗಳನ್ನು ಪಡೆದು ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ ಎಂದು ನಗರ ಘಟಕ ಅಧ್ಯಕ್ಷ ದೌಲಸಾಬ್ ದೊಡ್ಡಮನಿ ದೂರಿದರು.
ಕೂಡಲೇ ರಾಜ್ಯ ಸರ್ಕಾರ ತಡೆಹಿಡಿದ ಮಸೂದೆಯನ್ನು ಶೀಘ್ರವಾಗಿ ಮರು ಜಾರಿ ಮಾಡಬೇಕು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಲು ಆದ್ಯತೆ ನೀಡಬೇಕು. ಒಂದು ವೇಳೆ ಉದ್ದಿಮೆದಾರರ ಪರವಾಗಿ ಸರ್ಕಾರ ನಿಂತರೆ ರಾಜ್ಯದಾದ್ಯಂತ ಸಂಘಟನೆಯಿಂದ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಸುರೇಶ ಗೊಬ್ಬರಕಲ್, ಪ್ರಧಾನ ಕಾರ್ಯದರ್ಶಿ ಹನುಮೇಶ ತಿಪ್ಪನಹಟ್ಟಿ, ಉಪಾಧ್ಯಕ್ಷ ಪರಶುರಾಮ್ ಗೀತಾಕ್ಯಾಂಪ್, ಸದಸ್ಯರಾದ ಆಂಜಿನಯ್ಯ, ರವಿಕುಮಾರ ಹೊಸಮನಿ, ಮೈಬುಸಾಬ್, ವಿಶ್ವ, ಶಿವುಕುಮಾರ ಎಚ್, ಪ್ರದೀಪ್ ಪೂಜಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.