ADVERTISEMENT

ಭತ್ತಕ್ಕೆ ಮಾರುಕಟ್ಟೆ ಇಲ್ಲದೆ ಸಂಕಷ್ಟ

ಖರೀದಿಯಾಗದೆ ರಸ್ತೆ ಬದಿಗೆ ಬಿದ್ದ ಭತ್ತ ರಾಶಿ; ಖರೀದಿ ಕೇಂದ್ರ ಆರಂಭಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 19:45 IST
Last Updated 11 ಡಿಸೆಂಬರ್ 2019, 19:45 IST
ಜಾಲಹಳ್ಳಿಗೆ ಸಮೀಪದ ಕರಡಿಗುಡ್ಡ ಗ್ರಾಮದ ರೈತ ಬಸವರಾಜ ಅವರು ಬೆಳೆದ ಭತ್ತವನ್ನು ರಾಶಿ ಮಾಡಿರುವುದು
ಜಾಲಹಳ್ಳಿಗೆ ಸಮೀಪದ ಕರಡಿಗುಡ್ಡ ಗ್ರಾಮದ ರೈತ ಬಸವರಾಜ ಅವರು ಬೆಳೆದ ಭತ್ತವನ್ನು ರಾಶಿ ಮಾಡಿರುವುದು   

ಜಾಲಹಳ್ಳಿ: ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಹಾಗೂ ಬೆಲೆ ಇಲ್ಲ. ಹೀಗಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ನಾರಾಯಣಪುರ ಬಲದಂಡೆ ಕಾಲುವೆಯ ನೀರು ಪಡೆದು ಜಾಲಹಳ್ಳಿ ಹಾಗೂ ಗಲಗ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯ 80ಕ್ಕೂ ಹೆಚ್ಚು ಗ್ರಾಮಗಳಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆದಿದ್ದಾರೆ.

ಪಟ್ಟಣದಲ್ಲಿ ನಿರ್ಮಾಣವಾಗಿರುವ ಕೃಷಿ ಮಾರುಕಟ್ಟೆ ಇದ್ದು ಇಲ್ಲದಂತಾಗಿದೆ. ಹೆಸರಿಗೆ ಮಾತ್ರ ಕಟ್ಟಡ ನಿರ್ಮಾಣವಾಗಿದೆ. ಅಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ತಾಲ್ಲೂಕು ಕೇಂದ್ರದಲ್ಲಿಯೂ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಇರುವುದರಿಂದ ರೈತರು ಇನ್ನಷ್ಟು ತೊಂದರೆ ಅನುಭವಿಸಬೇಕಾಗಿದೆ.

ADVERTISEMENT

ಪ್ರಾರಂಭದಲ್ಲಿ 75 ಕೆಜಿಗೆ ₹1,200ರಂತೆ ದಲ್ಲಾಳಿಗಳು ಖರೀದಿ ಮಾಡಿದ್ದರು. ಅದರೆ, ಆಗ ಎಲ್ಲ ರೈತರ ಫಸಲು ಬಂದಿರಲಿಲ್ಲ. ಸ್ವಲ್ಪ ತಡವಾಗಿ ನಾಟಿ ಮಾಡಿದ ರೈತರ ಬೆಳೆ ಈಗ ರಾಶಿ ಮುಗಿದಿದೆ. ಕೆಲ ರೈತರು ಬೇಗ ಕಟಾವು ಮಾಡಿ ಭತ್ತ ಮಾರಾಟಕ್ಕೆ ಮುಂದಾದರೂ ಸಹ ದಲ್ಲಾಳಿಗಳು ಖರೀದಿ ಮಾಡಲು ಮುಂದೆ ಬರುತ್ತಿಲ್ಲ.

‘ವ್ಯಾಪಾರಿಗಳು ನಗದು ಹಣ ನೀಡದೆ ಕೆಲ ರೈತರ ಭತ್ತವನ್ನು ಉದ್ರಿಯಾಗಿ ಖರೀದಿಸಿದ್ದಾರೆ. ಮಾರುಕಟ್ಟೆಯಲ್ಲಿ ಭತ್ತಕ್ಕೆ ಬೇಡಿಕೆ ಇಲ್ಲದಾಗಿದ್ದು, ಪ್ರತಿ ಕ್ವಿಂಟಲ್‌ ಭತ್ತಕ್ಕೆ ₹1500 ಕ್ಕಿಂತ ಕಡಿಮೆ ದರದಲ್ಲಿ ಭತ್ತವನ್ನು ಕೇಳಲಾಗುತ್ತಿದೆ. ಹೀಗಾಗಿ ಮಾರುಕಟ್ಟೆಗೆ ಸಾಗಿಸಲು ರೈತರು ಹಿಂದೇಟು ಹಾಕುತ್ತಿದ್ದಾರೆ.

ಒಣಗಿದ ಭತ್ತವನ್ನು ಬರ್ಕಗಳ ಮೂಲಕ ಭದ್ರವಾಗಿ ಮುಚ್ಚಿಡಲಾಗಿದೆ. ಬಹುತೇಕ ವರ್ತಕರು, ದಲ್ಲಾಳಿಗಳು ರಾಶಿ ಸ್ಥಳಕ್ಕೆ ತೆರಳಿ ವಹಿವಾಟು ನಡೆಸಲು ಯತ್ನಿಸುತ್ತಿದ್ದು,ಕಡಿಮೆ ದರಕ್ಕೆ ಕೇಳುತ್ತಿದ್ದಾರೆ. ಕಳೆದ ವರ್ಷ ಕೆಲ ದಲ್ಲಾಳಿಗಳು ಭತ್ತ ಖರೀದಿಸಿ ರೈತರಿಗೆ ಹಣ ಪಾವತಿಸದೆ ವಂಚಿಸಿದ್ದಾರೆ. ಹೀಗಾಗಿ ರೈತರು ಯಾವ ನಂಬಿಕೆಯಿಂದ ಭತ್ತ ಮಾರಾಟ ಮಾಡುವುದು ಎಂದು ಚಿಂತೆಗೀಡಾಗಿದ್ದಾರೆ.

ಸಾಕಷ್ಟು ಖರ್ಚು ಮಾಡಿ ಭತ್ತ ಬೆಳೆಯಲಾಗಿದೆ. ಆದರೆ, ಈಗ ದರ ಇಲ್ಲದ ಸ್ಥಿತಿಯಿದೆ. ಹೀಗಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು ಭತ್ತ ಸಂಗ್ರಹಿಸಿಟ್ಟುಕೊಳ್ಳಲೂ ಆಗುತ್ತಿಲ್ಲ. ಪಟ್ಟಣದಲ್ಲಿ ಎಪಿಎಂಸಿ ಕೇಂದ್ರ ಇದ್ದರೂ ಅಧಿಕಾರಿಗಳು ಇಲ್ಲದೆ ಪಾಳು ಬಿದ್ದಿದೆ. ಹೀಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ರೈತರ ನೆರವಿಗೆ ಧಾವಿಸಬೇಕು. ಕೂಡಲೇ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಜಾಲಹಳ್ಳಿ–ಗಲಗ ಭಾಗದ ರೈತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.