ಕೆಂಭಾವಿ: ಮಹಾಶಕ್ತಿ ಜಗನ್ಮಾತೆ ಶ್ರೀದೇವಿ, ಗೋತ್ರ ಪುರುಷ ವೀರಭದ್ರೇಶ್ವರ ಮೂರ್ತಿ ಪ್ರತಿಷ್ಠಾಪನೆ, ದೇವಾಲಯ ಉದ್ಘಾಟನೆ, ಕಳಸಾರೋಹಣ, ರಂಭಾಪುರಿ ಜಗದ್ಗುರುಗಳ ಅಶ್ವರೂಢ ಸಾರೋಟ ಮೆರವಣಿಗೆ ಮಹೋತ್ಸವ, ಮಠದ ಶಿಲಾಮಂಟಪ ಶಂಕುಸ್ಥಾಪನೆ, ಅಯ್ಯಾಚಾರ ಶಿವದೀಕ್ಷೆ ಹಾಗೂ ಭಾವೈಕ್ಯತೆ ಜನಜಾಗೃತಿ ಧರ್ಮಸಭೆಯನ್ನು ಅ. 25 ಹಾಗೂ 26 ರಂದು ಹಮ್ಮಿಕೊಳ್ಳಲಾಗಿದೆ ಎಂದು ಹಿರೇಮಠ ಸಂಸ್ಥಾನ ಚನ್ನಬಸವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಧರ್ಮಸಭೆಯ ಭಿತ್ತಿಪತ್ರವನ್ನು ಭಾನುವಾರ ಅನಾವರಣಗೊಳಿಸಿ ಮಾತನಾಡಿದ ಅವರು, ಅ.25, ಬುಧವಾರದಂದು ಬೆಳಿಗ್ಗೆ ಲೋಕ ಕಲ್ಯಾಣಾರ್ಥವಾಗಿ ಪ್ರತ್ಯಂಗಿರಾ ಚಂಡಿಕಾ ಹೋಮ ಧಾರ್ಮಿಕ ವಿಧಿವಿಧಾನದ ಮೂಲಕ ಮೂರ್ತಿ ಪೂಜಾ ಸಮಾರಂಭ ನೆರವೇರಲಿದೆ.
ಅ.26 ಗುರುವಾರದಂದು ಬೆಳಿಗ್ಗೆ ಅಯ್ಯಾಚಾರ ಶಿವದೀಕ್ಷೆ, 10.30 ಕ್ಕೆ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಸಾರೋಟ ಮೆರವಣಿಗೆ ಮುಖಾಂತರ ಪುರಪ್ರವೇಶವಾಗುವುದು. ಪೂರ್ಣಕುಂಭ, ಕಳಸ, ವಾದ್ಯಗಳೊಂದಿಗೆ ಪೂಜ್ಯರನ್ನು ಬರಮಾಡಿಕೊಳ್ಳಲಾಗುವದು. ಜಗದ್ಗುರುಗಳ ಅಮೃತ ಹಸ್ತದಿಂದ ಮೂರ್ತಿ ಪ್ರತಿಷ್ಠಾಪನೆ, ದೇವಸ್ಥಾನ ಉದ್ಘಾಟನೆ, ಕಳಸಾರೋಹಣ ನೆರವೇರಿಸಲಾಗುವದು. ನಂತರ ವಿವಿಧ ಮಠಾಧೀಶರು, ಸಚಿವ ಶರಣಬಸಪ್ಪಗೌಡ ದರ್ಶನಾಪುರ ಸೇರಿದಂತೆ ರಾಜಕೀಯ ಮುಖಂಡರು, ವಿವಿಧ ಗ್ರಾಮದ ಸದ್ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ಸಮಾರಂಭ ಜರುಗುವದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.