ರಾಯಚೂರು: ರಾಘವೇಂದ್ರ ಸ್ವಾಮಿಗಳ 354ನೇ ಆರಾಧನೆ ನಿಮಿತ್ತ ಮಂತ್ರಾಲಯದಲ್ಲಿ ಭಾನುವಾರ ಸುಬುಧೇಂದ್ರ ತೀರ್ಥ ಶ್ರೀಗಳ ನೇತೃತ್ವದಲ್ಲಿ ಪೂರ್ವಾರಾಧನೆ ವಿಜೃಂಭಣೆಯಿಂದ ಜರುಗಿತು.
ಪೂರ್ವಾರಾಧನೆ ಪ್ರಯುಕ್ತ ಶ್ರೀರಂಗಂ ದೇವಸ್ಥಾನದ ಅಧಿಕಾರಿಗಳು, ಪುರೋಹಿತರು ಪವಿತ್ರ ಶೇಷವಸ್ತ್ರ ತಂದರು. ಕಲಾ–ತಂಡಗಳ ವಾದ್ಯಗಳೊಂದಿಗೆ ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.
ಸುಬುಧೇಂದ್ರ ತೀರ್ಥ ಸ್ವಾಮೀಜಿ ಶೇಷವಸ್ತ್ರವನ್ನು ರಾಯರಿಗೆ ಅರ್ಪಿಸಿದ್ದು, ಶ್ರೀರಂಗಂ ಅಧಿಕಾರಿಗಳಿಗೆ ಸನ್ಮಾನಿಸಿದರು. ನಂತರ ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು.
ಬೆಳಗಿನ ಜಾವ ಪಂಚಾಮೃತ ಅಭಿಷೇಕ, ಉತ್ಸವ ರಾಯರ ಪಾದಪೂಜೆ, ರಜತ ಸಿಂಹವಾಹನೋತ್ಸವ ಇನ್ನಿತರ ಧಾರ್ಮಿಕ ಕಾರ್ಯಗಳು ವಿಧಿವತ್ತಾಗಿ ನಡೆದವು. ರಾಯರು ರಚಿಸಿರುವ ಪರಿಮಳ ಗ್ರಂಥವನ್ನು ಪಲ್ಲಕ್ಕಿಯಲ್ಲಿ ಇರಿಸಿ ಮಠದ ಪ್ರಾಂಗಣದಲ್ಲಿ ಸಕಲ ಭಕ್ತರೊಂದಿಗೆ ಮೆರವಣಿಗೆ ಮಾಡಲಾಯಿತು.
ಸುಬುಧೇಂದ್ರ ತೀರ್ಥರು ಇದೇ ಸಂದರ್ಭದಲ್ಲಿ ರಾಯರ ಚಿನ್ನದ ಪಾದುಕೆಗಳಿಗೆ ಪೂಜೆ ಸಲ್ಲಿಸಿದರು.
ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಮಹಾರಾಷ್ಟ್ರದಿಂದ ಆಗಮಿಸಿರುವ ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.