ADVERTISEMENT

ಕಲುಷಿತ ನೀರು ಪೂರೈಕೆ: ರಾಯಚೂರು ಬಂದ್  

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 10:46 IST
Last Updated 5 ಜೂನ್ 2022, 10:46 IST

ರಾಯಚೂರು: ‘ನಗರಸಭೆಯಿಂದ ಪೂರೈಕೆ ಮಾಡಿದ ಕಲುಷಿತ ನೀರು ಸೇವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಖಂಡಿಸಿ ಸೋಮವಾರ ರಾಯಚೂರು ನಾಗರಿಕರ ವೇದಿಕೆ ವತಿಯಿಂದ ರಾಯಚೂರು ಬಂದ್‌ಗೆ ಕರೆ ನೀಡಲಾಗಿದೆ. ವಿವಿಧ ಸಂಘ ಸಂಸ್ಥೆಗಳ ಮುಖಂಡರು, ವ್ಯಾಪಾರಸ್ಥರು ಬೆಂಬಲಿಸಬೇಕು’ ಎಂದು ಹೋರಾಟದ ಸಂಚಾಲಕ ಜಿ.ಅಮರೇಶ ಮನವಿ ಮಾಡಿದರು.

ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘15 ವರ್ಷಗಳಿಂದ ಕಲುಷಿತ ನೀರು ಸರಬರಾಜು ಮಾಡಲಾಗುತ್ತಿದೆ. ನಗರಸಭೆಯ ಶುದ್ಧ ಕುಡಿಯುವ ನೀರು ನೀಡುವ ಭರವಸೆ ಈಡೇರಿಲ್ಲ. ಕಲುಷಿತ ನೀರು ಸೇವಿಸಿ ಇಂದಿರಾ ನಗರದ ಮಲ್ಲಮ್ಮ ಹಾಗೂ ಲಾಲ್ ಪಹಾಡಿ ಬಡಾವಣೆಯ ಗಫರ್ ಸಾವನ್ನಪ್ಪಿದ್ದಾರೆ. ಇದಕ್ಕೆ ನಗರಸಭೆ ಬೇಜವಾಬ್ದಾರಿಯೇ ಕಾರಣ. ಕೂಡಲೇ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ಜಲಜೀವನ ಮಿಷನ್, ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಇದುವರೆಗೂ ಪೂರ್ಣಗೊಂಡಿಲ್ಲ. ಇದರಿಂದ ನಾಗರಿಕರಿಗೆ ಸಮರ್ಪಕ ಹಾಗೂ ಶುದ್ಧ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ನಗರಸಭೆ ಆಡಳಿತ ಮಂಡಳಿಗೆ ಬಿಸಿ ಮುಟ್ಟಿಸಲು ಸೋಮವಾರ ರಾಯಚೂರು ಬಂದ್‌ಗೆ ಕರೆ ನೀಡಲಾಗಿದೆ. ಎಲ್ಲರೂ ಪಕ್ಷಾತೀತವಾಗಿ ಬೆಂಬಲಿಸಬೇಕು ಹಾಗೂ ಸಂಘ ಸಂಸ್ಥೆಯ ಮುಖಂಡರು, ವ್ಯಾಪಾರಸ್ಥರು ಅಂಗಡಿ ಮುಂಗಟ್ಟು ಬಂದ್ ಮಾಡಿ ಹೋರಾಟದಲ್ಲಿ ಭಾಗವಹಿಸಬೇಕು ಎಂದರು.

ADVERTISEMENT

ಬಂದ್ ಕೇವಲ ಪ್ರತಿಭಟನೆಯಾಗಿದ್ದು ಸಾರಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.

ಹೋರಾಟದ ಸಂಚಾಲಕ ಖಾಜಾ ಅಸ್ಲಂ ಪಾಶ, ಶ್ರೀನಿವಾಸ ಕೊಪ್ಪರ ಮತ್ತಿತರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.