ADVERTISEMENT

ರಾಯಚೂರು | ಆತ್ಕೂರು ಗ್ರಾಮದಲ್ಲಿ ಮೊಸಳೆಗಳ ಹಿಂಡು ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 26 ಜುಲೈ 2023, 12:32 IST
Last Updated 26 ಜುಲೈ 2023, 12:32 IST
   

ರಾಯಚೂರು: ತಾಲ್ಲೂಕಿನ ಆತ್ಕೂರು ಗ್ರಾಮದ ಕೃಷ್ಣ ನದಿ ಪಾತ್ರದಲ್ಲಿ ಮೊಸಳೆಗಳ ದಂಡು ಕಂಡು ಬಂದಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಕಳೆದ ನಾಲ್ಕು ದಿನಗಳಿಂದ ಜಿಟಿ ಜಿಟಿ ಮಳೆಯಾಗುತ್ತಿದ್ದು, ತಾಲ್ಲೂಕಿನ ಯಾಪಲದಿನ್ನಿ ಆತ್ಕೂರು ಬಳಿ ಕೃಷ್ಣ ನದಿಯಲ್ಲಿ ಭಾರಿ ಸಂಖ್ಯೆಯಲ್ಲಿ ಮೊಸಳೆಗಳು ಕಾಣಿಸಿಕೊಂಡಿವೆ. ಕೃಷ್ಣ ನದಿಗೆ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಸೆಳವಿನಲ್ಲಿ ಬಂದು ಪೊದೆಗಳು ಬಂಡೆಗಳ ಮೇಲೆ ಆಶ್ರಯ ಪಡೆದಿವೆ.

ನದಿಪಾತ್ರದ ಆತ್ಕೂರು ಹಾಗು ಡಿ.ರಾಂಪುರದಿಂದ ಗ್ರಾಮದ ಮೂಲಕ ನಡುಗಡ್ಡೆಯ ಐತಿಹಾಸಿಕ ದತ್ತಾತ್ರೇಯ ದೇವಸ್ಥಾನಕ್ಕೆ‌ ತೆಪ್ಪದ ಮೂಲಕ ಭಕ್ತರು ತೆರಳಲುವಾಗ ಮೊಸಳೆಗಳ ಹಿಂಡು ಕಂಡು ಬೆಚ್ಚಿ ಬಿದ್ದಿದ್ದಾರೆ. ಭಕ್ತರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ.

ADVERTISEMENT

ಆತ್ಕೂರು ಗ್ರಾಮದಿಂದ ನಡುಗಡ್ಡೆಯ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಮೇಲ್ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿದ್ದು ಇದರಿಂದಾಗಿ ತೆಪ್ಪದ ಸವಾರಿ ಅನಿವಾರ್ಯವಾಗಿದೆ. ಕಳೆದ ವರ್ಷ ಆತ್ಕೂರು ಗ್ರಾಮದಲ್ಲಿ ಬಾಲಕನೊಬ್ಬ ನೀರು ತುಂಬಿಕೊಳ್ಳುವಾಗ ಮೊಸಳೆ ದಾಳಿಯಿಂದ ಮೃತಪಟ್ಟಿದ್ದು ಈಗ ಮೊಸಳೆಗಳ ಪ್ರತ್ಯಕ್ಷ ಮತ್ತಷ್ಟು ಆತಂಕಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.