ರಾಯಚೂರು: ಭೀಮಾನದಿ ಮೂಲಕ ಕೃಷ್ಣಾನದಿಗೆ 8 ಲಕ್ಷ ಕ್ಯುಸೆಕ್ ಪ್ರವಾಹ ಸೇರಲಿದೆ ಎನ್ನುವ ಮುನ್ಸೂಚನೆ ಇರುವುದರಿಂದ, ಪರಿಸ್ಥಿತಿಯನ್ನು ನಿರ್ವಹಿಸುವುದಕ್ಕೆ ರಾಯಚೂರು ಜಿಲ್ಲಾಡಳಿತವು ಪೂರ್ವ ಸಿದ್ಧತೆ ಮಾಡಿಕೊಂಡು ಮೂರು ದಿನಗಳಿಂದ ಕಾಯುತ್ತಿದೆ.
ಪ್ರವಾಹ ನಿರ್ವಹಣೆಗಾಗಿ 56 ಸೈನಿಕರ ತಂಡವು ಶನಿವಾರವೇ ಜಿಲ್ಲೆಗೆ ಆಗಮಿಸಿದೆ. ಕೃಷ್ಣಾ ನದಿ ತೀರದಲ್ಲಿರುವ ರಾಯಚೂರು ತಾಲ್ಲೂಕಿನ 17 ಗ್ರಾಮಗಳಲ್ಲಿ ಜಿಲ್ಲಾಡಳಿತ ಅಧಿಕಾರಿಗಳ ತಂಡಗಳು ನಿಗಾ ವಹಿಸಿದ್ದಾರೆ. ಅಲ್ಲದೆ, ಪೊಲೀಸರು ನದಿತೀರದ ಗ್ರಾಮಗಳ ಜನರು ನದಿಗೆ ಇಳಿಯದಂತೆ ಎಚ್ಚರಿಕೆ ವಹಿಸಿದ್ದಾರೆ. ಪ್ರವಾಹ ಬಂದಾಗ ಜನರನ್ನು ಸ್ಥಳಾಂತರಿಸಲು ಗುರ್ಜಾಪುರ, ಬೂರ್ದಿಪಾಡ ಹಾಗೂ ಡಿ.ರಾಂಪೂರ ಜನರನ್ನು ಸ್ಥಳಾಂತರಿಸಲು ಸರ್ಕಾರಿ ಬಸ್ಗಳನ್ನು ಗ್ರಾಮಗಳಲ್ಲೇ ಇರಿಸಲಾಗಿದೆ.
ಆದರೆ, ನಿರೀಕ್ಷಿಸಿದಂತೆ ಕೃಷ್ಣಾನದಿಯಲ್ಲಿ ಪ್ರವಾಹ ಏರಿಕೆ ಆಗಿಲ್ಲ. ಇನ್ನೂ ಇಳಿಮುಖವಾಗಿದೆ. ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ ಹೊರಬಿಡುತ್ತಿದ್ದ ನೀರಿನ ಪ್ರಮಾಣ 6 ಸಾವಿರ ಕ್ಯುಸೆಕ್ಗೆ ತಲುಪಿದ್ದರೆ, ಚಿತ್ತಾಪುರ ತಾಲ್ಲೂಕಿನ ಸನ್ನತಿ ಬ್ಯಾರೇಜ್ನಿಂದ ಭೀಮಾನದಿಗೆ 3.7 ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಪ್ರವಾಹ ಒಂದು ಭಾಗದಲ್ಲಿ ಕಡಿಮೆಯಾಗಿದ್ದು, ಇನ್ನೊಂದು ಕಡೆ ಹೆಚ್ಚಳವಾದರೂ ನದಿತೀರದಲ್ಲಿ ಯಾವುದೇ ಅಪಾಯವಿಲ್ಲ. ಕೃಷ್ಣಾನದಿಯಲ್ಲಿ 4 ರಿಂದ 5 ಲಕ್ಷ ಕ್ಯುಸೆಕ್ ಪ್ರವಾಹ ಪ್ರತಿವರ್ಷವೂ ಸಾಮಾನ್ಯವಾಗಿ ಹರಿಯುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.