ರಾಯಚೂರು ತಾಲ್ಲೂಕಿನ ಪತ್ತೇಪೂರು ಗ್ರಾಮದಲ್ಲಿ ಹಳ್ಳದ ತಾತ್ಕಾಲಿಕ ಸೇತುವೆ ಮಳೆಯಿಂದಾಗಿ ಕೊಚ್ಚಿ ಹೋಗಿದೆ
ರಾಯಚೂರು: ‘ಮೂರು ದಿನಗಳಿಂದ ನಿರಂತರಾಗಿ ಮಳೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸಬೇಕು’ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ನಿತೀಶ್ ಕೆ ಸೂಚಿಸಿದ್ದಾರೆ.
‘ಜಿಲ್ಲೆಯಲ್ಲಿ ಇನ್ನು ಕೆಲ ದಿನಗಳ ಕಾಲ ಜೋರಾಗಿ ಸಿಡಿಲು, ಗಾಳಿ ಸಹಿತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ, ಗಾಳಿ ಅಥವಾ ಸಿಡಿಲಿನಿಂದಾಗಿ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದಲ್ಲಿ ಕೂಡಲೇ ಮಾಹಿತಿ ನೀಡಿ ಹಾನಿಗೆ ಕಾಲಮಿತಿಯೊಳಗ ಪರಿಹಾರಕ್ಕೆ ಕ್ರಮವಹಿಸಬೇಕು’ ಎಂದು ಹೇಳಿದ್ದಾರೆ.
ಬೆಳೆಹಾನಿಯ ಪ್ರಮಾಣದ ಬಗ್ಗೆ ಸಕಾಲಕ್ಕೆ ವರದಿ ಸಲ್ಲಿಸಲು ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು. ಜನ ಜಾನುವಾರು ಸಾವು, ಮನೆ ಕುಸಿತ ಪ್ರಕರಣಗಳಿಗೆ ಪರಿಹಾರ ಕಲ್ಪಿಸುವಲ್ಲಿ ವಿಳಂಬಕ್ಕೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದಲ್ಲಿ ನಿರಂತರ ಮಳೆ: 14 ವರ್ಷಗಳಲ್ಲೇ ಜುಲೈ 21ರಂದು 116.8 ಮಿ.ಮೀ ದಾಖಲೆ ಮಳೆಯಾಗಿದೆ. ರಾಯಚೂರು ನಗರದಲ್ಲಿ 22ರಂದು 22.2 ಎಂ.ಎಂ. ಹಾಗೂ ಜುಲೈ23 ರಂದು 16.4 ಮಳೆ ಸುರಿದಿದೆ. ಒಂದು ವಾರ ಜಿಲ್ಲೆಯಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಯಚೂರು ಗ್ರಾಮಾಂತರ, ಮಾನ್ವಿ, ಮಸ್ಕಿ ಹಾಗೂ ಲಿಂಗಸುಗೂರಲ್ಲಿ ಬುಧವಾರ ಸಾಧಾರಣ ಮಳೆಯಾಗಿದೆ.
ಮಳೆಗೆ ಕೊಚ್ಚಿಹೋದ ಪತ್ತೇಪೂರು ತಾತ್ಕಾಲಿಕ ಸೇತುವೆ
ರಾಯಚೂರು ತಾಲ್ಲೂಕಿನ ಪತ್ತೇಪೂರು ಗ್ರಾಮದಲ್ಲಿ ಹಳ್ಳಕ್ಕೆ ನಿರ್ಮಿಸಲಾಗುತ್ತಿರುವ ಸೇತುವೆ ಮಂದಗತಿಯಲ್ಲಿ ಸಾಗಿದೆ. ಬದಿಗೆ ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆ ಮಂಗಳವಾರ ಸುರಿದ ಮಳೆಗೆ ಕೊಚ್ಚಿಕೊಂಡು ಹೋಗಿದೆ. ಇದರಿಂದ ರಸ್ತೆ ಸಂಪರ್ಕ ಕಡಿದು ಹೋಗಿ ಐದು ಗ್ರಾಮಗಳ ಜನರು ಪರದಾಡುವಂತಾವಾಗಿದೆ.
ಪತ್ತೇಪೂರು, ಜಾಗೀರವೆಂಕಟಾಪೂರು, ರಘುನಾಥಹಳ್ಳಿ, ಸುಲ್ತಾನಪೂರ , ಅರಳಪ್ಪನಹೂಡಾ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಹೊಲಗಳಿಗೆ ತೆರಳುವ ರೈತರು , ಕೂಲಿಕಾರ್ಮಿಕರು, ರಾಯಚೂರಿಗೆ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಬೇಕಾಗಿದೆ.
ಆರು ತಿಂಗಳ ಹಿಂದೆ ಶಾಸಕ ಬಸನಗೌಡ ದದ್ದಲ್ ಕಾಮಗಾರಿಗೆ ಚಾಲನೆ ನೀಡಿ ಮಳೆಗಾಲ ಮೊದಲೇ ಸೇತುವೆ ಕಾಮಗಾರಿ ಮುಗಿಸಬೇಕು ಎಂದು ಸೂಚಿಸಿದ್ದರು. ಗುತ್ತಿಗೆದಾರರು ಬಿಲ್ ಆಗಿಲ್ಲ ಎಂಬ ಕಾರಣಕ್ಕೆ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಜಿಲ್ಲೆಯ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯಿದೆ ಅಡಿ ಶಿಸ್ತುಕ್ರಮ ಕೈಗೊಳ್ಳಲಾಗುವುದುನಿತೀಶ್ ಕೆ. ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.