
ರಾಯಚೂರು: ಮಸ್ಕಿ ತಾಲ್ಲೂಕಿನ ಗೋನವಾರ ಸಮೀಪದಲ್ಲಿ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುತ್ತಿದ್ದು ಗ್ರಾಮದ ಜನರು ಜಮೀನುಗಳಿಗೆ ಹೋಗುವ ರಸ್ತೆಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಹೆದ್ದಾರಿ ನಿರ್ಮಾಣ ಜಮೀನು ರಸ್ತೆ ವಂಚಿತ ರೈತರ ಹೋರಾಟ ಸಮಿತಿ ವತಿಯಿಂದ ನಗರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗೋನವಾರ ಗ್ರಾಮ ವ್ಯಾಪ್ತಿಯಲ್ಲಿ ಭಾರತ ಮಾಲಾ ಯೋಜನೆಯಡಿ ಹಾದು ಹೋಗುತ್ತಿರುವ 748ಎ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುತ್ತಿರುವುದು ಸ್ವಾಗತಾರ್ಹ. ನಮ್ಮ ಗ್ರಾಮದ ಶೇ 90 ರಷ್ಟು ಜಮೀನಿನ ಕೃಷಿ ಚಟುವಟಿಕೆಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಸಮಸ್ಯೆಯಾಗುತ್ತಿದೆ, ಸರ್ಜಾಪುರ, ಕುಪ್ಪಗುಡ್ಡ ಸೇರಿ ಇತರೆ ಗ್ರಾಮಗಳಿಗೆ ಕೃಷಿ ಪರಿಕರ ಒಂದು ರಸ್ತೆ, ಚಿಕ್ಕಹೆಸರೂರು ಹಾಗೂ ಇತರೆ ಗ್ರಾಮ, ಪಟ್ಟಣಕ್ಕೆ ಹೋಗಲು ಮುಂಡರಗಿ ರಸ್ತೆ ಹಾಗೂ ಇನ್ನೊಂದು ಸೇರಿ ಮೂರು ರಸ್ತೆ ಇವೆ. ಎಲ್ಲಾ ರಸ್ತೆಗಳಿಂದ ಜಮೀನುಗಳಿಗೆ ಹೋಗಲು ಅನುಕೂಲ ಮಾಡಿಕೊಡಬೇಕು ಹಾಗೂ ಅಂಡರ್ ಪಾಸ್ ನಿರ್ಮಾಣ ಮಾಡಬಾರದು ಎಂದು ಒತ್ತಾಯಿಸಿದರು.
ವೇಳೆ ರೈತರು ಹೆದ್ದಾರಿ ದಾಟಿಕೊಂಡು ಹೋಗಲು ದೊಡ್ಡದಾದ ಸೇತುವೆ ನಿರ್ಮಾಣ ಮಾಡಿದಲ್ಲಿ ರೈತರಿಗೆ ಅನುಕೂಲವಾಗಲಿದೆ. ರಸ್ತೆಗೆ ಅಡ್ಡಲಾಗಿ ಗೋಡೆ ನಿರ್ಮಾಣ ಮಾಡಿದರೆ ಕಿಲೋಮೀಟರ್ ಸುತ್ತಿಕೊಂಡು ಜಮೀನುಗಳಿಗೆ ಹೋಗುವುದಕ್ಕೆ ತೊಂದರೆಯಾಗುತ್ತದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಶರಣಪ್ಪ ಉದ್ಬಾಳ, ಎನ್ಎಸ್ ವೀರೇಶ, ವಿನೋದ, ಮಲ್ಲನಗೌಡ, ಗ್ರಾಮಸ್ಥರಾದ ಅಮರೇಗೌಡ ಮಾಳಾಪೂರ, ತಿರುಪತಿ ಗೋನವಾರ, ಸಿದ್ರಾಮಪ್ಪ ಕೆಲ್ಲೂರು, ಬಹುದ್ದೂರು ಸಾಬ್, ದೇವರೆಡ್ಡಿ ಮೇಟಿ, ಅಮರೇಶ ಗೌಂಡಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.