ADVERTISEMENT

ನಮ್ಮ ಶಾಲೆ ನಮ್ಮ ಹಕ್ಕು: ‘ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಉಳಿವು ಆದ್ಯತೆಯಾಗಲಿ’

ಶೈಕ್ಷಣಿಕ ಅವಲೋಕನ ಕಾರ್ಯಾಗಾರದಲ್ಲಿ ಸಂಸದ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 6:35 IST
Last Updated 23 ಫೆಬ್ರುವರಿ 2026, 6:35 IST
ರಾಯಚೂರಿನ ನವೋದಯ ಶಿಕ್ಷಣ ಸಂಸ್ಥೆಯ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ನಮ್ಮ ಶಾಲೆ ನಮ್ಮ ಹಕ್ಕು’ ಕಾರ್ಯಕ್ರಮವನ್ನು ಸಂಸದ ಜಿ.ಕುಮಾರ ನಾಯಕ ಉದ್ಘಾಟಿಸಿದರು. ಸೈಯದ್ ಅಫೀಜುಲ್ಲಾ, ಕೆ. ಜಯಣ್ಣ. ನಿರಂಜನಾರಾಧ್ಯ ಉಪಸ್ಥಿತರಿದ್ದರು
ರಾಯಚೂರಿನ ನವೋದಯ ಶಿಕ್ಷಣ ಸಂಸ್ಥೆಯ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ನಮ್ಮ ಶಾಲೆ ನಮ್ಮ ಹಕ್ಕು’ ಕಾರ್ಯಕ್ರಮವನ್ನು ಸಂಸದ ಜಿ.ಕುಮಾರ ನಾಯಕ ಉದ್ಘಾಟಿಸಿದರು. ಸೈಯದ್ ಅಫೀಜುಲ್ಲಾ, ಕೆ. ಜಯಣ್ಣ. ನಿರಂಜನಾರಾಧ್ಯ ಉಪಸ್ಥಿತರಿದ್ದರು   

ರಾಯಚೂರು: ‘ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕೆಲಸ ನಡೆಯುತ್ತಿರುವುದು ಕಳವಳಕಾರಿಯಾಗಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಹದಗೆಡದಂತೆ ಸಂರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಸಂಸದ ಜಿ.ಕುಮಾರ ನಾಯಕ ಹೇಳಿದರು.

ನಗರದ ನವೋದಯ ಶಿಕ್ಷಣ ಸಂಸ್ಥೆಯ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ವೇದಿಕೆ, ಭಾರತ ಜ್ಞಾನ ವಿಜ್ಞಾನ ಸಮಿತಿ, ರಾಜ್ಯ ಮಹಿಳಾ ಒಕ್ಕೂಟ ಮತ್ತು ಶಿಕ್ಷಣ ಹಕ್ಕಿಗಾಗಿ ಕೆಲಸ ಮಾಡುತ್ತಿರುವ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ನಡೆದ ‘ನಮ್ಮ ಶಾಲೆ ನಮ್ಮ
ಹಕ್ಕು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂವಿಧಾನದ ಪೀಠಿಕೆಯಲ್ಲಿ ಪ್ರಸ್ತಾಪಿಸಲಾದ ವಿಷಯಗಳನ್ನು ಸಾಧಿಸಲು ಇರುವ ಸಾಧನ ಶಿಕ್ಷಣ ಮಾತ್ರವಾಗಿದೆ. ಹೊಸ ಸಮಾಜವನ್ನು ಕಟ್ಟಲು ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಪ್ರಮುಖ ಸಾಧನವಾಗಿದೆ. ಮನೆಯಲ್ಲಿನ ಶಿಕ್ಷಣ ಇತಿಮಿತಿ ಹೊಂದಿರುತ್ತಿದ್ದು, ಮಗು ಪರಿಪೂಣ‌೯ತೆ ಪಡೆಯಲು ಸಾರ್ವಜನಿಕ ಶಿಕ್ಷಣ ಅವಶ್ಯವಾಗಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

‘ಸರ್ಕಾರಿ ಶಾಲೆಗಳ ಪಾತ್ರ ಮತ್ತು ಅವುಗಳ ರಕ್ಷಣೆಗೆ ಸಾರ್ವಜನಿಕ ರು ದೃಢವಾಗಿ‌ ನಿಲ್ಲಬೇಕಾಗಿದೆ. ನಮ್ಮ ಶಾಲೆ ನಮ್ಮ ಹಕ್ಕು ಎನ್ನುವುದು ಜನರ ಘೋಷಣೆಯಾಗಬೇಕು’ ಎಂದರು

ಶಿಕ್ಷಕರ ಕೊರತೆ ಮುಂದುವರಿದಿರುವುದು ದುರಂತ: ಸಾಮಾಜಿಕ ಕಾರ್ಯಕರ್ತ ಕೆ. ಜಯಣ್ಣ ಮಾತನಾಡಿ, ‘ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದರೂ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಮುಂದುವರಿದಿರುವುದು ದುರಂತದ ಸಂಗತಿಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಈವರೆಗೆ ಶಾಲೆಗಳ ಸಮಸ್ಯೆಯನ್ನು ನಾವು ಹಕ್ಕಿನ ದೃಷ್ಟಿಯಿಂದ ಚರ್ಚಿಸಿದ್ದೇವೆ. ಆದರೆ ಈಗ ಇದು ಕೇವಲ ಹಕ್ಕಿನ ಪ್ರಶ್ನೆಯಲ್ಲ, ನಮ್ಮ ಸ್ವಾಭಿಮಾನದ ಸಂಗತಿಯಾಗಿದೆ’ ಎಂದು ಅವರು ಹೇಳಿದರು.
‘ನಮ್ಮ ಭಾಗದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲದೆ ತರಗತಿಗಳು ನಡೆದಿರುವುದು ಮಕ್ಕಳ ಶಿಕ್ಷಣದ ಗುಣಮಟ್ಟಕ್ಕೆ ಧಕ್ಕೆ ತರುತ್ತಿದೆ. ಇರುವ ಶಿಕ್ಷಕರು ಮಕ್ಕಳೊಂದಿಗೆ ಭಾವನಾತ್ಮಕವಾಗಿ ಕೆಲಸ ಮಾಡಬೇಕಿದೆ‌‘ ಎಂದು ಹೇಳಿದರು.

‘ಶಿಕ್ಷಕರ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಿ, ಮೂಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಸರ್ಕಾರಿ ಶಾಲೆಗಳ ಮೇಲಿನ ನಂಬಿಕೆಯನ್ನು ಬಲಪಡಿಸಬೇಕು. ಅಲ್ಲದೇ ಶಾಲೆಯಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಕಾರ್ಯನಿರ್ವಹಿಸಬೇಕು’ ತಿಳಿಸಿದರು.

ಶಿಕ್ಷಣ ತಜ್ಞ ನಿರಂಜನಾರಾಧ್ಯ ಮಾತನಾಡಿದರು. ಸೈಯದ್ ಅಫೀಜುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಯಚೂರು ಬಿಜಿವಿಎಸ್ ನಗರ ಘಟಕದ ಅಧ್ಯಕ್ಷ ರತನ್ ಚೌಹಾಣ, ಮೋಕ್ಷಮ್ಮ, ಕೆ.ಸತ್ಯನಾರಾಯಣ, ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಾ ಶಾವಂತಗೇರ, ಗ್ರಾಕೂಸು ಸುವರ್ಣ ಭಟ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ರೆಡ್ಡಿ, ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಗದ್ದಿ, ಸಾವಿತ್ರಿಬಾಯಿ ಪುಲೆ ಸಂಘದ ಜಿಲ್ಲಾಧ್ಕ್ಷೆ ಛಾಯಾ,ಮೊಹಿನುಲ್ಲಾ ಹಕ್, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸ್ಸಪ್ಪ. ಮಾಂತೇಶ ಬಿರಾದಾರ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀ ವಿಜಯರಾಜೇಂದ್ರ.ಅವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.