ADVERTISEMENT

ಕ್ರೀಡೆಗಳು ಉತ್ಸಾಹ ಹೆಚ್ಚಿಸುತ್ತವೆ: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2021, 14:27 IST
Last Updated 6 ನವೆಂಬರ್ 2021, 14:27 IST
ರಾಯಚೂರಿನ ಕೃಷಿ ವಿವಿ ಮೈದಾನದಲ್ಲಿ ರಾಯಚೂರು ರಿಪೋರ್ಟ್‌ರ್ಸ್‌ ಗಿಲ್ಡ್‌ನಿಂದ ಶನಿವಾರ ಆಯೋಜಿಸಿದ್ದ ಕ್ರಿಕೆಂಟ್‌ ಪಂದ್ಯಾವಳಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಅವರು ಬ್ಯಾಟಿಂಗ್‌ ಮಾಡಿ ಉದ್ಘಾಟಿಸಿದರು
ರಾಯಚೂರಿನ ಕೃಷಿ ವಿವಿ ಮೈದಾನದಲ್ಲಿ ರಾಯಚೂರು ರಿಪೋರ್ಟ್‌ರ್ಸ್‌ ಗಿಲ್ಡ್‌ನಿಂದ ಶನಿವಾರ ಆಯೋಜಿಸಿದ್ದ ಕ್ರಿಕೆಂಟ್‌ ಪಂದ್ಯಾವಳಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಅವರು ಬ್ಯಾಟಿಂಗ್‌ ಮಾಡಿ ಉದ್ಘಾಟಿಸಿದರು   

ರಾಯಚೂರು: ಕ್ರೀಡೆಗಳು ಉತ್ಸಾಹವನ್ನು ಹೆಚ್ಚಿಸುತ್ತವೆ. ಒತ್ತಡದ ಕೆಲಸದ ಮಧ್ಯೆಯೂ ಪತ್ರಕರ್ತರು ಕ್ರಿಕೆಟ್‌ ಪಂದ್ಯ ಆಡುತ್ತಿರುವುದು ಸಂತೋಷದ ಸಂಗತಿ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಹೇಳಿದರು.

ನಗರದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ರಾಯಚೂರು ರಿಪೋರ್ಟರ್ಸ್‌ ಗಿಲ್ಡ್‌ನಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ನಿಮಿತ್ತ ಶನಿವಾರ ಏರ್ಪಡಿಸಿದ್ದ ಕ್ರಿಕೆಟ್‌ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರು ಒಂದೇ ಕಡೆಗೆ ಸ್ನೇಹಿತರಾಗಿ ಸೇರಿ ಆಟವಾಡುವುದು ನಿಜಕ್ಕೂ ಖುಷಿಯ ವಿಚಾರ. ಆಟದಲ್ಲಿ ಸೋಲು, ಗೆಲುವು ಸಹಜ. ಅದನ್ನು ಮುಖ್ಯವಾಗಿ ತೆಗೆದುಕೊಳ್ಳಬಾರದು. ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಮಹತ್ವದ್ದಾಗಿದೆ. ಇದನ್ನು ಹೀಗೇ ಮುಂದುವರಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಕೃಷಿ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ರಾಜಣ್ಣ ಅವರು ಮಾತನಾಡಿ, ದಿನಕ್ಕೊಂದು ತಾಸು ವ್ಯಾಯಾಮ; ದಿನವಿಡೀ ಆರಾಮ ಎಂಬುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೈಹಿಕವಾಗಿ ಸದೃಢವಾಗಿದ್ದರೆ ಮನಸ್ಸು ಕೂಡಾ ಸಂತೋಷದಿಂದ ಕೂಡಿರುತ್ತದೆ ಎಂದು ಹೇಳಿದರು.

ರಾಯಚೂರು ರಿಪೋರ್ಟ್‌ರ್ಸ್‌ ಗಿಲ್ಡ್‌ ಕಾರ್ಯದರ್ಶಿ ವಿಜಯ ಜಾಗಟಗಲ್‌ ಸ್ವಾಗತಿಸಿದರು. ಗಿಲ್ಡ್‌ ಅಧ್ಯಕ್ಷ ಚನ್ನಬಸವಣ್ಣ, ಪತ್ರಕರ್ತರಾದ ವೆಂಕಟಸಿಂಗ್‌, ಬಸವರಾಜ ನಾಗಡಗಿನ್ನಿ, ಶಿವಮೂರ್ತಿ ಹಿರೇಮಠ ಇದ್ದರು.

ಅನಿಲ ಕುಂಬ್ಳೆ ತಂಡಕ್ಕೆ ಗೆಲುವು: ಬಸವರಾಜ ನಾಗಡದಿನ್ನಿ ನಾಯಕತ್ವದ ‘ರಾಹುಲ್‌ ದ್ರಾವಿಡ್‌ ತಂಡ’, ವೆಂಕಟಸಿಂಗ್‌ ನಾಯಕತ್ವದ ‘ಸುನೀಲ ಗವಾಸ್ಕರ್‌ ತಂಡ’ ಹಾಗೂ ಚನ್ನಬಸವಣ್ಣ ನಾಯಕತ್ವದ ‘ಅನಿಲ ಕುಂಬ್ಳೆ ತಂಡ’ ತಂಡಗಳ ಮಧ್ಯೆ 8 ಓವರ್‌ಗಳ ಪಂದ್ಯಾವಳಿಗಳು ನಡೆದವು. ಅನಿಲ ಕುಂಬ್ಳೆ ತಂಡವು ಎರಡೂ ತಂಡಗಳ ವಿರುದ್ಧ ಗೆಲುವು ಸಾಧಿಸಿ ಪ್ರಥಮ ಸ್ಥಾನ ಪಡೆಯಿತು. ಸುನೀಲ ಗವಾಸ್ಕರ್‌ ತಂಡದ ವಿರುದ್ಧ ಗೆಲುವು ಸಾಧಿಸಿದ ರಾಹುಲ್‌ ದ್ರಾವಿಡ್‌ ತಂಡವು ಎರಡನೇ ಸ್ಥಾನ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.