
ರಾಯಚೂರು: ಜನವರಿ 29, 30 ಹಾಗೂ 31ರಂದು ನಿಗದಿಯಾದ ರಾಯಚೂರು ಉತ್ಸವ-2026ರ ವೇದಿಕೆಯ ಹಾಗೂ ನಾನಾ ಕಾರ್ಯಕ್ರಮಗಳ ಸಮಗ್ರ ಸ್ವರೂಪದ ಪ್ರಾತ್ಯಕ್ಷಿಕೆಯನ್ನು ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಎನ್.ಎಸ್. ಬೋಸರಾಜು, ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, ಡಾ.ಎಸ್.ಶಿವರಾಜ ಪಾಟೀಲ, ಬಸನಗೌಡ ತುರವಿಹಾಳ, ಹಂಪಯ್ಯ ನಾಯಕ, ಎ ವಸಂತಕುಮಾರ ವೀಕ್ಷಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜನವರಿ 4ರಂದು ನಡೆದ ಜನಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಸಚಿವರು ಹಾಗೂ ಶಾಸಕರು ಮಾತನಾಡಿ, ಉತ್ಸವಕ್ಕೆ ಸಂಬಂಧಿಸಿದಂತೆ ಅನೇಲ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.
ಎಲ್ಲ ಸಮಿತಿಗಳ ಮೇಲೆ ಮೇಲ್ವಿಚಾರಣಾ ಸಮಿತಿಯೊಂದನ್ನು ರಚಿಸಿ ಪ್ರತಿ ನಿತ್ಯ ಎಲ್ಲ ತಯಾರಿಯ ಮೇಲ್ವಿಚಾರಣೆ ಆಗಬೇಕು. ಕೂಡಲೇ ಜಿಲ್ಲೆಯ ಎಲ್ಲ ಸಂಘ-ಸಂಸ್ಥೆಗಳ, ಅಂಗಡಿಕಾರರ ಸಭೆ ನಡೆಸಿ ಅವರ ಸಲಹೆ ಪಡೆಯಬೇಕು.ಆಯಾ ತಹಶೀಲ್ದಾರರು ಹಾಗೂ ತಾಪಂ ಇಒಗಳು ಆಯಾ ತಾಲ್ಲೂಕಿನಲ್ಲಿ ಸಭೆ ನಡೆಸಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡವಾಗಿ ಕೆಲಸ ಮಾಡಿ ಕಾರ್ಯನಿರ್ವಹಿಸಬೇಕು. ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳ ಆಡಳಿತ ಮಂಡಳಿಯ ಮುಖ್ಯಸ್ಥರ ಸಭೆ ನಡೆಸಬೇಕು ಎಂದು ಹೇಳಿದರು.
ಜಿಲ್ಲೆಯ ಎಲ್ಲ ಸಾಹಿತಿಗಳು, ಕಲಾವಿದರು, ಕವಿಗಳು, ವಕೀಲರು, ಮಹಿಳಾ ಸಂಘಗಳು, ಆಟೊ ಹಾಗೂ ವಿವಿಧ ವಾಹನ ಚಾಲಕರು, ಯುವ ಸಂಘಟನೆಗಳು ಮತ್ತು ನಾಗರಿಕ ಸಮಿತಿಗಳು ಸೇರಿದಂತೆ ಬೇರೆಲ್ಲ ಜನ ಸಮುದಾಯಗಳ ಸಭೆಗಳು ನಡೆಯಬೇಕು. ಎಲ್ಲ ಶಾಲೆಗಳ ಶಿಕ್ಷಕರ ಹಾಗೂ ಕಾಲೇಜು ಉಪನ್ಯಾಸಕರ ಸಭೆಗಳು ಆಗಬೇಕು ಎಂದು ಸಚಿವರು ಶಾಸಕರು ಸಲಹೆ ಮಾಡಿದರು.
ವಾಲ್ಮೀಕಿ ವಿಶ್ವವಿದ್ಯಾಲಯ ಸೇರಿದಂತೆ ಮಹತ್ವದ ಬೇರೆ ಬೇರೆ ವಿದ್ಯಾ ಸಂಸ್ಥೆಗಳಲ್ಲಿ ಸಹ ಬೇರೆ ಬೇರೆ ಕಾರ್ಯಕ್ರಮಗಳ ಆಯೋಜನೆ ಮಾಡಲು ಸಲಹೆ ಮಾಡಿದರು.
ಸಭೆಯಲ್ಲಿ ಮೊದಲಿಗೆ ರಾಯಚೂರು ಉತ್ಸವದ ಲೋಗೊ ವೀಕ್ಷಿಸಿದರು.
ಮುಖ್ಯ ಕಾರ್ಯಕ್ರಮದ ವೇದಿಕೆ ಹಾಗೂ ಹೆಸರಾಂತ ಕಲಾವಿದರು ಭಾಗಿಯಾಗುವ ಬೃಹತ್ ವೇದಿಕೆಗಳ ಮಾದರಿ ವೀಕ್ಷಣೆ ಮಾಡಿದರು.
ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ಅನೇ ವರ್ಷಗಳ ನಂತರ ಉತ್ಸವ ನಡೆಯುತ್ತಿದೆ. ಇದು ಜನರ ಉತ್ಸವ ಆಗಬೇಕು. ಅಧಿಕಾರಿಗಳು ಉತ್ಸವದ ಕಾರ್ಯಗಳನ್ನು ಹಗರುವಾಗಿ ತೆಗೆದುಕೊಳ್ಳಬಾರದು. ಇದು ರಾಯಚೂರು ಸಿಟಿ ಉತ್ಸವ ಅಲ್ಲ; ಜಿಲ್ಲಾ ಉತ್ಸವವಾಗಿದೆ. ಹಾಗಾಗಿ ಎಲ್ಲರೂ ಪಕ್ಷಬೇಧ ಮರೆತು ಒಗ್ಗೂಡಿ ಉತ್ಸವ ಮಾಡಬೇಕು’ ಎಂದು ಸಲಹೆ ಮಾಡಿದರು.
‘ರಾಜ್ಯಮಟ್ಟದ ವಾಲಿಬಾಲ್, ಕಬ್ಬಡ್ಡಿ ಪಂದ್ಯ ನಡೆಯಲಿವೆ. ಸೈಕ್ಲಿಂಗ್ ಮ್ಯಾರಾಥಾನ್, ಸೈಕ್ಲಿಂಗ್ ಓಟ, ಕುಸ್ತಿ ಪಂದ್ಯ, ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಗಳು ನಡೆಯಲಿವೆ. ಜನವರಿ 29ರಂದು ಬೆಳಿಗ್ಗೆ ಮೆರವಣಿಗೆ, ಸಂಜೆ 5ರಿಂದ ಉತ್ಸವದ ಉದ್ಘಾಟನೆ ನಡೆಯಲಿದೆ. ಜಿಲ್ಲಾ ರಂಗಮಂದಿರ, ಕೃಷಿ ವಿವಿ ಆವರಣದಲ್ಲಿನ ಕಾನ್ಫರೆನ್ಸ್ ಹಾಲ್ ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಏಕಕಾಲಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವ್ಯವಸ್ಥೆ ಮಾಡಲಾಗಿದೆ. ಜನವರಿ 30ರಂದು ಬೆಳಗ್ಗೆ ಉದ್ಯೋಗ ಮೇಳ ನಡೆಯಲಿದೆ. ಫಲಪುಷ್ಪ ಮೇಳವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತಿದೆ. ಮತ್ಸಮೇಳ, ಡಾಗ್ ಶೋ, ಶಾಲಾ ಮಕ್ಕಳಿಗಾಗಿ ಪ್ರಬಂಧ, ಸಾಹಿತಿಗಳಿಂದ ಕವಿಗೋಷ್ಟಿ, ಮಹಿಳಾ ಗೋಷ್ಠಿ, ಮಾಧ್ಯಮ ಗೋಷ್ಠಿ ನಡೆಸಲಾಗುವುದು ಎಂದರು.
ಆಹಾರ ಮೇಳ ನಡೆಸಿ100 ಸ್ಟಾಲಗಳ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ. ಜನವರಿ 31ರಂದು ಗ್ಯಾರಂಟಿ ಮೇಳ ಬೆಳಿಗ್ಗೆ 10 ದಿಂದ 2 ಗಂಟೆವರೆಗೆ ಜೊತೆಗೆ ಕೃಷಿ ಮೇಳ ನಡೆಸಲು ಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ ಸಭೆಗೆ ವಿವರಿಸಿದರು.
ಸಭೆಯಲ್ಲಿ ತಾಲ್ಲೂಕು ಗ್ಯಾರಂಟಿ ಸಮಿತಿಯ ಪವನ್ ಕಿಶೋರ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷು ಗಿರಿ, ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ಪಾಲಿಕೆಯ ಸಮಿತಿ ಕಾರ್ಯದರ್ಶಿ ಕೃಷ್ಣ ಶಾವಂತಗೇರಿ, ತಹಸೀಲ್ದಾರ ಸುರೇಶ ವರ್ಮಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ರೀಡೋತ್ಸವದ ಮೊದಲ ಪಂದ್ಯಕ್ಕೆ ಚಾಲನೆ:
‘ರಾಯಚೂರು ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಯಂತೆ ಈ ಬಾರಿ ರಾಯಚೂರು ನಡೆಯಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ರಾಯಚೂರು ಉತ್ಸವದ ಪ್ರಚಾರಾರ್ಥ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಜಿಲ್ಲೆಯ ಪ್ರತಿಯೊಂದು ಸಂಘ-ಸಂಸ್ಥೆಗಳು, ಎಲ್ಲ ಶಾಲಾ ಕಾಲೇಜುಗಳು ಈ ಉತ್ಸವದಲ್ಲಿ
ಸಕ್ರಿಯ ಭಾಗಿಯಾಗಿ ಉತ್ಸವ ಯಶಗೊಳಿಸಬೇಕು’ ಎಂದು ಮನವಿ ಮಾಡಿದರು.
ಸಣ್ಣ ನೀರಾವರಿ ಸಚಿವ ಎನ್. ಎಸ್. ಬೋಸರಾಜು, ಶಾಸಕ ಡಾ.ಎಸ್ ಶಿವರಾಜ ಪಾಟೀಲ ಮಾತನಾಡಿದರು.
ಶಾಸಕ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, ಎ. ವಸಂತಕುಮಾರ, ಜಿಲ್ಲಾಧಿಕಾರಿ ನಿತೀಶ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರಣಾಂಕ್ಷು ಗಿರಿ, ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ, ಮುಖಂಡರಾದ ಪವನ್ ಕಿಶೋರ ಪಾಟೀಲ, ಡಾ.ರಝಾಕ್ ಉಸ್ತಾದ್, ಪಾಲಿಕೆಯ ಉಪ ಆಯುಕ್ತೆ ಸಂತೋಷರಾಣಿ, ತಹಶೀಲ್ದಾರ್ ಸುರೇಶ ವರ್ಮಾ, ಅಮರೇಶ ಬಿರಾದಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ವೀರೇಶ ನಾಯಕ ಉಪಸ್ಥಿತರಿದ್ದರು. ಪಾಲಿಕೆಯ ಸಮಿತಿ ಕಾರ್ಯದರ್ಶಿ ಕೃಷ್ಣ ಶಾವಂತಗೇರಿ ಸ್ವಾಗತಿಸಿದರು.