ADVERTISEMENT

ರಾಯಚೂರು: ಬಸ್ ನಿಲ್ದಾಣಕ್ಕೆ ಜಿಲ್ಲಾಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 7:14 IST
Last Updated 14 ಡಿಸೆಂಬರ್ 2020, 7:14 IST
   

ರಾಯಚೂರು: ಬೇರೆಬೇರೆ ಊರುಗಳಿಗೆ ತೆರಳುವ ಸಾರ್ವಜನಿಕರಿಗೆ ತೊಂದರೆ ಆಗದಂತೆ ವಾಹನಗಳ‌ ವ್ಯವಸ್ಥೆ ಮಾಡುವುದಕ್ಕೆ ಸರ್ಕಾರದಿಂದ ತುರ್ತು ಆದೇಶ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿನೀಡಿ ಪರಿಶೀಲಿಸಿದರು.

ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಜನರ ಬೇಡಿಕೆಗೆ ಅನುಗುಣವಾಗಿ ಸರ್ಕಾರಿ ಬಸ್ ಗಳನ್ನು ಬಿಡುವಂತೆ ಎನ್ ಇಕೆಆರ್ ಟಿಸಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದರಂತೆ ಬೆಳಿಗ್ಗೆ 35 ಬಸ್ ಗಳು ತೆರಳಿವೆ. ಪ್ರತಿದಿನದ ವೇಳಾಪಟ್ಟಿಯಂತೆಯೇ ಬಸ್ ಗಳು ಸಂಚರಿಸುತ್ತಿವೆ. ಹೈದರಾಬಾದ್, ಕರ್ನೂಲ್ ಸೇರಿದಂತೆ ಅಂತರರಾಜ್ಯ ಪ್ರಯಾಣದ ಬಸ್ ಗಳು ಕೂಡಾ ಸಂಚರಿಸುತ್ತಿವೆ' ಎಂದರು.

'ಈಗಾಗಲೇ ಬಸ್ ಚಾಲಕರು ಹಾಗೂ‌ ನಿರ್ವಾಹಕರು ಸಾಕಷ್ಟು ಸಂಖ್ಯೆಯಲ್ಲಿ ಹಾಜರಾಗಿದ್ದಾರೆ. ನೌಕರರಿಗೆ ಮತ್ತು ಪ್ರಯಾಣಿಕರಿಗೆ ತೊಂದರೆ ಆಗದಂತೆ ಸೂಕ್ತ ಭದ್ರತೆ ಒದಗಿಸಲು ಪೊಲೀಸ್ ಇಲಾಖೆಯವರಿಗೂ ತಿಳಿಸಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸಹ ಜನರಿಗೆ ಅನುಕೂಲ‌ ಕಲ್ಪಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ಬಸ್ ನಲ್ಲಿ ಒಬ್ಬರು ಕಾನ್ ಸ್ಟೇಬಲ್ ಸಂಚರಿಸಲು ತಿಳಿಸಲಾಗಿದೆ' ಎಂದು ಹೇಳಿದರು.

ADVERTISEMENT

'ಬಸ್‌ಗಳಿಗೆ ಕಲ್ಲು ಎಸೆಯುವುದು ಅಥವಾ‌ ಇನ್ನಿತರೆ ಕೃತ್ಯಗಳನ್ನು ಎಸಗುವವರ ವಿರುದ್ಧ ಕಠಿಣ ಕ್ರಮ‌ ಜರುಗಿಸಲಾಗುವುದು. ಖಾಸಗಿ ವಾಹನಗಳು‌ ಹೆಚ್ಚಿನ ಪ್ರಯಾಣ ವಸೂಲಿ ಮಾಡುತ್ತಿರುವುದನ್ನು ಪರಿಶೀಲಿಸಿ ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.