ADVERTISEMENT

ರಾಯಚೂರು: ಮಳೆ ಹಾನಿ ಸಮೀಕ್ಷಾ ವರದಿ ಶೀಘ್ರ

ಸಂತ್ರಸ್ತರಿಗೆ ಆಹಾರ ಪೊಟ್ಟಣ ವಿತರಣೆ: ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 3:58 IST
Last Updated 24 ಸೆಪ್ಟೆಂಬರ್ 2020, 3:58 IST
ವೆಂಕಟೇಶಕುಮಾರ
ವೆಂಕಟೇಶಕುಮಾರ   

ರಾಯಚೂರು: ಜಿಲ್ಲೆಯಲ್ಲಿ ಈಚೆಗೆ ಸುರಿದ ಮಳೆಯಿಂದ ಹಾನಿಯಾದ ಮನೆ, ಬೆಳೆಗಳ ಹಾನಿಯ ಬಗ್ಗೆ ಸಮಿಕ್ಷೆ ನಡೆದಿದ್ದು ಮೂರು ದಿನಗಳೊಳಗೆ ವರದಿ ಬರಲಿದೆಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಅವರು ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಂದಾಗಿ ತಾಲ್ಲೂಕಿನ ಮಿಡಲಗದಿನ್ನಿ, ಇಡಪನೂರು ಸೇರಿದಂತೆ ವಿವಿಧೆಡೆ ನೀರಿನಿಂದ ಜಲಾವೃತ್ತವಾದ ಗ್ರಾಮಸ್ಥರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ. ಮನೆ ಕುಸಿದ ಹಾಗೂ ನೀರು ನುಗ್ಗಿ ಹಾನಿಯಾಗಿರುವ ಕುರಿತು ಸಮೀಕ್ಷೆ ನಡೆಯುತ್ತಿದೆ ಎಂದರು.

ಮಳೆಯಿಂದಾಗಿ ನಗರದ ಜಹೀರಬಾದ್, ಸಿಯಾತಲಾಬ್, ಜಲಾಲ ನಗರ, ನೀರಭಾವಿ ಕುಂಟಾ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಮನೆಗಳಲ್ಲಿ ನೀರು ನುಗ್ಗಿದ್ದು ಪರಿಶಿಲಿಸಲಾಗಿದೆ. ಆರ್‌ಟಿಒ ಕಚೇರಿಯಿಂದ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಯಿಲ್ಲದೇ ಸಮಸ್ಯೆಯಾಗಿದೆ. ಮಾವಿನಕೆರೆಯಲ್ಲಿ ನೀರಿನ ಮಟ್ಟ ಹೆಚ್ಚಳವಾಗುವದರಿಂದ ನೀರು ಹರಿಯಲು ತಡೆಯಲಾಗಿದೆ ಎಂದು ಹೇಳಿದರು.

ADVERTISEMENT

ಮಳೆ ನೀರು ಸಾರಗವಾಗಿ ಹರಿಯಲು ಇರುವ ಸಮಸ್ಯೆ ಹಾಗೂ ರಾಜಕಾಲುವೆ ಸ್ವಚ್ಛತೆಗೆ ಅಂದಾಜು ಪಟ್ಟಿ ಸಲ್ಲಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಚರಂಡಿಗಳಲ್ಲಿ ಮಣ್ಣು ತುಂಬಿದ್ದ ರಿಂದಲೂ ಸಹ ತೊಂದರೆಯಾಗಿದೆ. ಏಕಾಏಕಿ ಹೆಚ್ಚು ನೀರು ಬಂದಿದ್ದರಿಂದ ಚರಂಡಿ ಮೇಲೆ ನೀರು ಹರಿದುಮನೆಗಳಿಗೆ ನುಗ್ಗಿದೆ. ನೀರು ಹರಿಯುವಿಕೆಯ ಮೂಲಗಳನ್ನು ಪತ್ತೆ ಮಾಡಿ ಸರಾಗವಾಗಿ ನೀರು ಹರಿಯುವ ವ್ಯವಸ್ಥೆ ಮಾಡಲಾಗುತ್ತದೆ. ತಾಲ್ಲೂಕಿನ ಕುಕುನೂರು ಗ್ರಾಮದ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಲಾಗಿದೆ. ಜಿಲ್ಲಾ ಪಂಚಾಯಿತಿಯಿಂದ ಮೂರು ಕಿ.ಮೀ ರಸ್ತೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಿದ್ದಪಡಿಸಲಾಗಿದೆ. ವಿಮಾನ ನಿಲ್ದಾಣದ ಸರ್ವೆ ಆರಂಭವಾಗಿದೆ ಎಂದರು.

ವೈಟಿಪಿಎಸ್ ಚಿಮಣಿಗಳಿಂದ ಅಡ್ಡಿಯಿಲ್ಲ: ತಾಲ್ಲೂಕಿನ ವೈಟಿಪಿಎಸ್ ಚಿಮಣಿಗಳಿಂದ ಯಾವುದೇ ಅಡ್ಡಿ ಇಲ್ಲ ಎಂದು ಒಎಸ್‍ಎಲ್ ವರದಿ ನೀಡಿದೆ. 44 ಷರತ್ತುಗಳನ್ನು ವಿಧಿಸಿದ್ದು, ಚಿಮಣಿ ಟವರ್‌ಗಳ ಎತ್ತರಕ್ಕೆ ₹ 89 ಲಕ್ಷ ಪ್ರಸ್ತಾವ ಸಿದ್ದಪಡಿಸಲಾಗಿದೆ. ಭೂ ದಾಖಲೆಗಳಲ್ಲಿಯೂ ಯರಮರಸ್ ವಿಮಾನ ನಿಲ್ದಾಣವೆಂದು ನಮೂದಿಸಿದ ಜಮೀನು ಇದೆ. ಅವಶ್ಯಕತೆ ಜಮೀನು ಸರ್ವೆ ನಂತರ ಮಾಹಿತಿ ಲಭ್ಯವಾಗಲಿದೆ. ಅಗತ್ಯಬಿದ್ದರೆ ಹೆಚ್ಚುವರಿ ಭೂಮಿಯನ್ನು ಸಹ ಖರೀದಿ ಮಾಡಿ ನೀಡಲಾಗುತ್ತದೆ. ಒತ್ತುವರಿಯಾಗಿದ್ದರೂ ತೆರವುಗೊಳಿಸಲಾಗುತ್ತದೆ ಎಂದರು.

₹ 79 ಕೋಟಿಯ ಪ್ರಸ್ತಾವ: ಈ ಹಿಂದೆ ಆದ ಮಳೆಯಿಂದಾಗಿ ಆಗಿದ್ದ ₹ 79 ಕೋಟಿ ಹಾನಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಈಚೆಗೆ ಸುರಿದ ಮಳೆಯಿಂದಾದ ಹಾನಿಯ ಮರು ಪ್ರಸ್ತಾವ ಸಲ್ಲಿಸಲಾಗುವುದು. ನಗರದ ಇಎಸ್‍ಐ ಆಸ್ಪತ್ರೆಯಲ್ಲಿ ಮಳೆ ನೀರು ಸಂಗ್ರಹವಾಗುವ ಬಗ್ಗೆ ಗಮನಹರಿಸಿದ್ದು ಬೇರೆಡೆಗೆ ಸ್ಥಳಾಂತರಕ್ಕೆ ಸೂಚಿಸಲಾಗಿದೆ ಎಂದರು.

ನಿವೇಶನ ಗುರುತಿಸಿ ಪ್ರಸ್ತಾವ ಸಲ್ಲಿಸಿದರೆ ಭೂಮಿ ನೀಡಲು ಜಿಲ್ಲಾಡಳಿತ ಸಿದ್ದ. ಮಳೆಯಿಂದಾಗಿ ಐತಿಹಾಸಿಕವಾದ ಪಂಚಬೀಬಿ ಪಹಡ್ ಕಟ್ಟಡ ಕುಸಿತದ ಕುರಿತು ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.