ಮಸ್ಕಿ: ಎರಡನೇ ಶ್ರೀಶೈಲ ಎಂದೇ ಪ್ರಸಿದ್ಧಿ ಪಡೆದ ಪಟ್ಟಣದ ಮಲ್ಲಿಕಾರ್ಜುನ ದೇವರ ಮಹಾರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.
ಸಂಜೆ 4-30ಕ್ಕೆ ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಮಹಾರಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಲ್ಲಿಕಾರ್ಜುನನ ವಿಗ್ರಹ ಹೊತ್ತ ಪಲ್ಲಕ್ಕಿ ರಥದ ಸುತ್ತ ಪ್ರದಕ್ಷಣೆ ಹಾಕಿತು. ಬಳಿಕ ಭಕ್ತರ ಜಯ ಘೋಷಗಳ ನಡುವೆ ಉತ್ಸವ ಮೂರ್ತಿಯನ್ನು ರಥದ ಮೇಲೆ ಪ್ರತಿಷ್ಠಾಪಿಸಲಾಯಿತು.
ರಾಯಚೂರು ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಮಿಣಿ ಹಿಡಿದು ರಥ ಎಳೆದರು. ಉತ್ತುತ್ತಿ, ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ದೈವದ ಕಟ್ಟೆವರೆಗೆ ರಥ ಎಳೆದು ವಾಪಸ್ ದೇವಸ್ಥಾನಕ್ಕೆ ತರಲಾಯಿತು. ಗಚ್ಚಿನ ಮಠದ ವರರುದ್ರಮುನಿ ಸ್ವಾಮೀಜಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ. ಪಾಟೀಲ, ಉಪಾಧ್ಯಕ್ಷೆ ಕವಿತಾ ಎಂ.ಮಾಟೂರು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಿವಣ್ಣ ನಾಯಕ ಸೇರಿದಂತೆ ಮುಖಂಡರು ಹಾಗೂ ಅಧಿಕಾರಿಗಳು ಇದ್ದರು.
ಭೋವಿ ಸಮಾಜದ ಬಂಧುಗಳು ಬೆಳಿಗ್ಗೆಯಿಂದಲೇ ಮಡಿವಂತಿಕೆಯಿಂದ ರಥೋತ್ಸವದಲ್ಲಿ ಪಾಲ್ಗೊಂಡು ಗಾಲಿಗೆ ಮಿಣಿ ಹಾಕುವ ಮೂಲಕ ಸರಳ ರಥೋತ್ಸವಕ್ಕೆ ಸಾಕ್ಷಿಯಾದರು.
ರಥೋತ್ಸವದ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಸಿಪಿಐ ದೀಪಕ್ ಬಿ.ಬೂಸರೆಡ್ಡಿ, ಸಬ್ ಇನ್ಸ್ಪೆಕ್ಟರ್ ಸಣ್ಣ ವೀರೇಶ ನೇತೃತ್ವದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.