ದೇವದುರ್ಗ: ಕೆಲವರು ಸ್ವಾರ್ಥ ರಾಜಕೀಯಕ್ಕಾಗಿ ತಾಲ್ಲೂಕನ್ನು ಒಡೆಯಲು ಮುಂದಾಗಿದ್ದು, ಅದನ್ನು ಖಂಡಿಸಿ ಅ.14ರಂದು ಅಖಂಡ ತಾಲ್ಲೂಕು ಉಳಿಗಾಗಿ ಜನಾಕ್ರೋಶ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಂಡ ದೇವದುರ್ಗ ತಾಲೂಕು ಐಕ್ಯ ಹೋರಾಟ ಸಮಿತಿ ಮುಖಸ್ಥ ಹನುಮಂತಪ್ಪ ಕಾಕರಗಲ್ ಹೇಳಿದರು.
ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇವದುರ್ಗ ತಾಲ್ಲೂಕು ಇಂದಿಗೂ ಮೂಲಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ತಾಲ್ಲೂಕು ಅಭಿವೃದ್ಧಿ ಮಾಡುವ ಬದಲು ಸ್ಥಳೀಯ ಶಾಸಕರು ತಮ್ಮ ಸ್ವಾರ್ಥಕ್ಕಾಗಿ ತಾಲ್ಲೂಕು ಒಡೆಯಲು ಮುಂದಾಗಿದ್ದಾರೆ‘ ಎಂದು ಆರೋಪಿಸಿದರು.
ಅರಕೇರಾ ಗ್ರಾಮ ದೇವದುರ್ಗ ದಿಂದ 18ಕಿ.ಮೀ ಮತ್ತು ಅರಕೇರಾ ದಿಂದ ಸಿರವಾರ 14ಕಿ.ಮೀ ಹತ್ತಿರದಲ್ಲಿ ಇದ್ದು, ಇಷ್ಟೇ ಅಂತರದಲ್ಲಿ ಎರಡು ತಾಲ್ಲೂಕು ಕೇಂದ್ರಗಳು ಇರುವುದು ವೈಜ್ಞಾನಿಕ ಕ್ರಮವಾಗಿದೆ ಎಂದರು.
ಈಗಾಗಲೇ ಮಾನ್ವಿ ತಾಲ್ಲೂಕಿನ ಸಿರವಾರ ಪಟ್ಟಣವನ್ನು ಕಳೆದ ವರ್ಷ ಹೊಸ ತಾಲ್ಲೂಕನ್ನಾಗಿ ಘೋಷಣೆ ಮಾಡಲಾಗಿದ್ದು, ಅಲ್ಲಿನ ತಾಲ್ಲೂಕು ಕೇಂದ್ರಕ್ಕೆ ದೇವದುರ್ಗ ತಾಲ್ಲೂಕಿನ ಕೆಲವು ಗ್ರಾಮಗಳನ್ನು ಸೇರ್ಪಡೆ ಮಾಡುವುದು ನಡೆದಿದೆ ಎಂದರು.
ಮುಖಂಡ ಹನುಮಂತರಾಯ ಚಿಕ್ಕಗುಡ್ಡ ಮಾತನಾಡಿ, ಅಖಂಡ ತಾಲ್ಲೂಕು ಉಳಿವಿಗಾಗಿ ಈಗಾಗಲೇ ಹಳ್ಳಿ, ಹಳ್ಳಿಗೂ ಹೋಗಿ ಜನ ಜಾಗೃತಿ ಮೂಡಿಸಲಾಗುತ್ತಿದೆ. ಸ್ಥಳೀಯ ಶಾಸಕರು ತಾಲ್ಲೂಕಿಗೆ ಸುಮಾರು 50 ಸಾವಿರ ಆಶ್ರಯ ಮನೆಗಳನ್ನು ಮಂಜೂರು ಮಾಡಿಸಿ ನಿರ್ಮಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಇಂದಿಗೂ ಸಾವಿರಾರು ಕುಟುಂಬಗಳು ಗುಡಿಸಿಲಿನಲ್ಲಿ ಜೀವನ ಮಾಡುತ್ತಿದ್ದಾರೆ.ಎಂದು ಟೀಕಿಸಿದರು. ಗೋಸಲ್, ಜಿ.ಬಸವರಾಜ ನಾಯಕ, ಮೇಲಪ್ಪ ಬಾವಿಮನಿ, ಮಲ್ಲಯ್ಯ ಕಟ್ಟಿಮನಿ, ಗೋವಿಂದರಾಯ ಚಿಕ್ಕಗುಡ್ಡ, ಶಿವರಾಜ ನಾಯಕ, ಶಂಕರಗೌಡ ಚನ್ನೂರು, ಸಿದ್ದಲಿಂಗಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.