ರಾಯಚೂರು: ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಕಡಿಮೆಯಾಗಿರುವ ಕಾರಣ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ (ಆರ್ಟಿಪಿಎಸ್) ವಿದ್ಯುತ್ ಉತ್ಪಾದನೆ ತಗ್ಗಿಸಲಾಗಿದೆ. ಒಟ್ಟು ಎಂಟು ಘಟಕಗಳ ಪೈಕಿ ಒಂದು ಘಟಕದಲ್ಲಿ ಮಾತ್ರ ವಿದ್ಯುತ್ ಉತ್ಪಾದನೆ ಮುಂದುವರಿಸಲಾಗಿದೆ.
ಆರ್ಟಿಪಿಎಸ್ನ ಒಟ್ಟು ಎಂಟು ಘಟಕಗಳ ಪೈಕಿ, ಒಂದು ಘಟಕ ಎರಡು ವರ್ಷಗಳಿಂದ ಬಂದ್ ಇದೆ. ಇನ್ನೊಂದು ತಾಂತ್ರಿಕ ಕಾರಣದಿಂದಾಗಿ ದುರಸ್ತಿಯಲ್ಲಿದೆ. ಒಂದು ಘಟಕದಲ್ಲಿ ಮಾತ್ರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಐದು ಘಟಕಗಳಲ್ಲಿ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ.
ಬೇಸಿಗೆ ಕಾರಣ ಕೃಷಿಗೆ ಪಂಪ್ಸೆಟ್ ಬಳಕೆ ಕಡಿಮೆಯಾಗಿದೆ ಹಾಗೂ ಎರಡು ವಾರಗಳಿಂದ ರಾಜ್ಯದಲ್ಲಿ ಮಳೆ ಬೀಳುತ್ತಿರುವುದರಿಂದ ಕಟ್ಟಡ ನಿರ್ಮಾಣದಂತಹ ಉದ್ಯಮಕ್ಕೆ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಬಳಕೆಯಾಗುತ್ತಿದೆ. ಹೀಗಾಗಿ ಸಹಜವಾಗಿಯೇ ವಿದ್ಯುತ್ ಬೇಡಿಕೆ ಕಡಿಮೆಯಾಗಿ ಉತ್ಪಾದನೆಯೂ ಇಳಿಮುಖವಾಗಿದೆ.
‘ಯರಮರಸ್ನ ಎರಡು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಕೆಪಿಸಿ ಬೇಡಿಕೆಯಂತೆ ಇಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಕಲ್ಲಿದ್ದಲಿನಿಂದ ವಿದ್ಯುತ್ ಉತ್ಪಾದನೆ ಮಾಡುವುದು ವೆಚ್ಚದಾಯಕ. ಹೀಗಾಗಿ ಮಳೆಗಾಲದಲ್ಲಿ ಜಲವಿದ್ಯುತ್ಗೆ ಆದ್ಯತೆ ನೀಡಲಾಗುತ್ತದೆ’ ಎಂದು ಆರ್ಟಿಪಿಎಸ್ನ ಕಾರ್ಯನಿರ್ವಾಹಕ ನಿರ್ದೇಶಕ ಜಯಪ್ರಕಾಶ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.