ADVERTISEMENT

ಸಿಂಧನೂರು: ಖರೀದಿ ನಿಯಮ ಬದಲಾವಣೆಗೆ ರೈತ ಮುಖಂಡರ ಆಗ್ರಹ

ಸಂಪೂರ್ಣ ಜೋಳ ಖರೀದಿಗೆ ಸರ್ಕಾರ ಕ್ರಮಕೈಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 13:12 IST
Last Updated 16 ಜನವರಿ 2022, 13:12 IST
ಸಿಂಧನೂರಿನ ಶಾಸಕ ವೆಂಕಟರಾವ್ ನಾಡಗೌಡ ಅವರನ್ನು ರೈತರು ಭೇಟಿ ಮಾಡಿ, ಮನವಿ ಸಲ್ಲಿಸಿದರು
ಸಿಂಧನೂರಿನ ಶಾಸಕ ವೆಂಕಟರಾವ್ ನಾಡಗೌಡ ಅವರನ್ನು ರೈತರು ಭೇಟಿ ಮಾಡಿ, ಮನವಿ ಸಲ್ಲಿಸಿದರು   

ಸಿಂಧನೂರು: ಜೋಳ ಖರೀದಿಗೆ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ನಿಯಮಗಳನ್ನು ಬದಲಾವಣೆ ಮಾಡಿ ಬೆಳೆದ ಸಂಪೂರ್ಣ ಜೋಳವನ್ನು ಖರೀದಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿ ಭಾನುವಾರ ಉದ್ಬಾಳ, ಅಲಬನೂರು, ಕನ್ನಾರಿ, ಬೆಳಗುರ್ಕಿ, ಗೋಮರ್ಸಿ ಗ್ರಾಮಗಳ ರೈತರು, ಶಾಸಕ ವೆಂಕಟರಾವ್ ನಾಡಗೌಡ ಅವರಲ್ಲಿ ಮನವಿ ಮಾಡಿದರು.

ರೈತರೊಂದಿಗೆ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ನಾಡಗೌಡ ಅವರು, ‘ಜೋಳ ಬೆಳೆದ ರೈತರು ಅತ್ಯಂತ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಸಣ್ಣ ಹಾಗೂ ಅತಿಸಣ್ಣ ರೈತರು ಬೆಳೆದ ಜೋಳವನ್ನು ಖರೀದಿ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಒಬ್ಬ ರೈತನಿಂದ 20 ಕ್ವಿಂಟಲ್ ಮಾತ್ರ ಖರೀದಿಗೆ ಅವಕಾಶವಿದೆ. ಇದರಿಂದಾಗಿ ರೈತರು ಸಂಕಷ್ಟವನ್ನು ಎದುರಿಸುವಂತಾಗಿದೆ’ ಎಂದರು.

‘ಈ ಬಗ್ಗೆ ಸದನದಲ್ಲೂ ಚರ್ಚಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಸಂಸದ ಸಂಗಣ್ಣ ಕರಡಿ, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಸೇರಿದಂತೆ ಅನೇಕ ಮುಖಂಡರೊಂದಿಗೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳ ಬಳಿ ತೆರಳಿ ಮನವಿ ಮಾಡಲಾಗಿದೆ. ಕಾನೂನು ಸಚಿವರೊಂದಿಗು ಚರ್ಚಿಸಲಾಗಿದೆ. ಅವರುಗಳಿಂದ ಸಕರಾತ್ಮಕ ಭರವಸೆ ಸಿಕ್ಕಿದೆ’ ಎಂದು ವಿವರಿಸಿದರು.

ADVERTISEMENT

`ಜ.19 ರಂದು ಸದಸನ ಸಮಿತಿ ಸಭೆ ಇರುವುದಾಗಿ ತಿಳಿದುಬಂದಿದೆ. ಸಮಿತಿಯ ಸಭೆಗೂ ತೆರಳಿ ಜೋಳ ಖರೀದಿ ಮಾನದಂಡಗಳನ್ನು ಬದಲಾಯಿಸಲು ಮತ್ತು ಬೆಳೆದ ಜೋಳವನ್ನೆಲ್ಲ ಖರೀದಿಸಲು ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿ ಅವರಿಗೆ ಭೇಟಿಯಾಗಿ ಒತ್ತಡ ಹೇರಲಾಗುವುದು. ಆಗಲು ಪರಿಹಾರ ದೊರೆಯದಿದ್ದರೆ ರೈತರೊಂದಿಗೆ ಸೇರಿ ದೊಡ್ಡಮಟ್ಟದ ಹೋರಾಟ ರೂಪಿಸಲಾಗುವುದು’ ಎಂದು ಹೇಳಿದರು.

ಜೆಡಿಎಸ್ ತಾಲ್ಲೂಕ ಅಧ್ಯಕ್ಷ ಬಸವರಾಜ ನಾಡಗೌಡ, ತಾಲ್ಲೂಕ ಪಂಚಾಯಿತಿ ಮಾಜಿ ಸದಸ್ಯ ಚಂದ್ರಭೂಪಾಲ ನಾಡಗೌಡ, ರೈತರಾದ ಹೊನ್ನನಗೌಡ ಬೆಳಗುರ್ಕಿ, ಮಲ್ಲಯ್ಯ ಮಾಡಸಿರವಾರ, ಶ್ರೀನಿವಾಶ ಗೋಮರ್ಸಿ, ವೀರೇಶ ಉದ್ಬಾಳ, ವೀರೇಶ ಮಡಿವಾಳ, ವೀರನಗೌಡ, ಮಾತಂಗಗೌಡ ಅಲಬನೂರು, ಶರಣಪ್ಪ ಕನ್ನಾರಿ, ವಿಶ್ವನಾಥಗೌಡ ಕನ್ನಾರಿ, ನಾಗರಾಜ ಮಾಡಸಿರವಾರ, ಮೂಕಪ್ಪ ವಿರುಪಣ್ಣ, ಮಾಳಪ್ಪ, ಹಂಪಯ್ಯ, ಈರಣ್ಣ, ವೀರೇಶ ಉದ್ಬಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.