ಕವಿತಾಳ: ಪಟ್ಟಣದ ರಸ್ತೆ ಗುಂಡಿಯಲ್ಲಿ ಕಾರು ಸಿಕ್ಕಿ ಹಾಕಿಕೊಂಡ ಪರಿಣಾಮ ಕಾರಿನಲ್ಲಿದ್ದ ಅಧಿಕಾರಿಗಳು ಗುರುವಾರ ಪರದಾಡುವಂತಾಯಿತು.
ರಸ್ತೆ ಗುಂಡಿಗೆ ಇಳಿದ ಕಾರು ಮುಂದೆ ಚಲಿಸದ ಕಾರಣ ಕಾರಿನಲ್ಲಿದ್ದ ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಫಿಯುದ್ದೀನ್, ಪಟ್ಟಣ ಪಂಚಾಯಿತಿ ಎಂಜಿನಿಯರ್ ಕೃಷ್ಣ ಮತ್ತು ನರಸಮ್ಮ ಕಾರಿನಿಂದ ಇಳಿದು ನಡು ರಸ್ತೆಯಲ್ಲಿಯೇ ನಿಲ್ಲುವಂತಾಯಿತು. ಅಧಿಕಾರಿಗಳ ಅಸಹಾಯಕತೆ ಗಮನಿಸಿ ನೆರವಿಗೆ ಬಂದ ಆಟೊ ಚಾಲಕರು ಮತ್ತು ಸಾರ್ವಜನಿಕರು ಕಾರನ್ನು ಗುಂಡಿಯಿಂದ ಮೇಲೆತ್ತಿದರು.
‘ಹದಗೆಟ್ಟ ರಸ್ತೆ ದುರಸ್ತಿ ಬಗ್ಗೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಹೀಗಾಗಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಕಾರನ್ನು ತೆಗೆಯುವುದು ಬೇಡ’ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು.
ವಿಭಜಕ ನಿರ್ಮಾಣದಿಂದ ಲಿಂಗಸುಗೂರು ರಾಯಚೂರು ರಾಜ್ಯ ಹೆದ್ದಾರಿ ಕಿರಿದಾಗಿದ್ದು ವಾಹನ ದಟ್ಟಣೆಯಿಂದ ಆಳವಾದ ಗುಂಡಿಗಳು ಬಿದ್ದಿವೆ. ಮಳೆ ನೀರು ನಿಂತ ಪರಿಣಾಮ ರಸ್ತೆಯಲ್ಲಿ ತಗ್ಗು ಕಾಣದೆ ವಾಹನಗಳು ಸಿಕ್ಕಿ ಹಾಕಿಕೊಳ್ಳುತ್ತಿವೆ. ಈಗ ಅಧಿಕಾರಿಗಳಿಗೆ ರಸ್ತೆ ದುಸ್ಥಿತಿ ಅರಿವಿಗೆ ಬಂದಿದ್ದು ಈಗಲಾದರೂ ದುರಸ್ತಿಗೆ ಮುಂದಾಗಬಹುದು ಎಂದು ಸ್ಥಳೀಯರು ಮಾತನಾಡಿಕೊಂಡರು.
‘ರಸ್ತೆ ದುರಸ್ತಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಗುಂಡಿಯಲ್ಲಿ ನಿಂತ ನೀರನ್ನು ತೆಗೆದು ತಾತ್ಕಾಲಿಕವಾಗಿ ಗುಂಡಿ ಮುಚ್ಚುವಂತೆ ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷರಿಗೆ ಸೂಚಿಸಲಾಗುವುದು’ ಎಂದು ಎಇಇ ಶಫಿಯುದ್ದೀನ್ ತಿಳಿಸಿದರು.
‘ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿಗೆ ಗಮನಹರಿಸಬೇಕುʼ ಎಂದು ಆರೋಗ್ಯ ನಿರೀಕ್ಷಕ ರಾಘವೇಂದ್ರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.