ADVERTISEMENT

ಶಕ್ತಿನಗರ | ವಿದ್ಯುತ್‌ಗೆ ಬೇಡಿಕೆಯಿಲ್ಲದೆ ಆರ್‌ಟಿಪಿಎಸ್‌ ಘಟಕಗಳೆಲ್ಲ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 15:28 IST
Last Updated 6 ಜುಲೈ 2020, 15:28 IST
ಆರ್‌ಟಿ‍‍ಪಿಎಸ್‌
ಆರ್‌ಟಿ‍‍ಪಿಎಸ್‌   

ಶಕ್ತಿನಗರ: ರಾಜ್ಯದಲ್ಲಿ ಜಲವಿದ್ಯುತ್‌ ಮೂಲಗಳಿಂದ ಗರಿಷ್ಠ ಪ್ರಮಾಣದ ವಿದ್ಯುತ್‌ ಉತ್ಪಾದನೆ ಆಗುತ್ತಿರುವುದರಿಂಧ ಶಾಖೋತ್ಪನ್ನ ವಿದ್ಯುತ್‌ಗೆ ಬೇಡಿಕೆ ಇಲ್ಲದೆ, ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಆರ್‌ಟಿಪಿಎಸ್‌)ದ ಇದೇ ಮೊದಲ ಸಲ ಎಲ್ಲ ಎಂಟು ಘಟಕಗಳನ್ನು ಭಾನುವಾರದಿಂದ ಸ್ಥಗಿತಗೊಳಿಸಲಾಗಿದೆ.

‘ಪ್ರತಿವರ್ಷ ಬೇಸಿಗೆಯಲ್ಲಿ ವಿದ್ಯುತ್‌ ಬೇಡಿಕೆಗೆ ಆರ್‌ಟಿಪಿಎಸ್‌ ಆಧಾರಸ್ತಂಭವಾಗಿರುತ್ತಿತ್ತು. ಈ ವರ್ಷ ಲಾಕ್‌ಡೌನ್‌ ಇದ್ದುದರಿಂದ ಅಧಿಕ ಪ್ರಮಾಣದಲ್ಲಿ ವಾಣಿಜ್ಯ ಚಟುವಟಿಕೆ ಆರಂಭವಾಗಲಿಲ್ಲ. ಈಗ ಎಲ್ಲೆಡೆಯೂ ಮಳೆ ಆಗುತ್ತಿದೆ. ಪವನ ಮತ್ತು ಸೌರಶಕ್ತಿ ವಿದ್ಯುತ್‌ ಉತ್ಪಾದನೆಯೂ ಇದೆ. ವಿದ್ಯುತ್‌ ಬೇಡಿಕೆಗಿಂತ ಲಭ್ಯತೆ ಹೆಚ್ಚಿದೆ. ಈ ಎಲ್ಲ ಕಾರಣಗಳಿಂದ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಆರ್‌ಟಿಪಿಎಸ್‌ ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟಚಲಾಪತಿ ಹೇಳಿದರು.

‘ಪ್ರತಿನಿತ್ಯ 25 ಸಾವಿರ ಟನ್‌ ಕಲ್ಲಿದ್ದಲು ಬಳಕೆಯಾಗುತ್ತಿತ್ತು. ಸದ್ಯಕ್ಕೆ ಆರ್‌ಟಿಪಿಎಸ್‌ ವಿದ್ಯುತ್ ಘಟಕಗಳ ಉತ್ಪಾದನೆ ಆರಂಭ ಆಗುವವರೆಗೂ, ಕಲ್ಲಿದ್ದಲು ಪೂರೈಸುವುದನ್ನು ಸ್ಥಗಿತ ಮಾಡುವಂತೆ ಕಲ್ಲಿದ್ದಲು ಗಣಿ ಕಂಪನಿಯ ಮಾಲೀಕರಿಗೆ ತಿಳಿಸಲಾಗಿದೆ’ ಎಂದು ಕಲ್ಲಿದ್ದಲು ವಿಭಾಗದ ಮುಖ್ಯ ಎಂಜಿನಿಯರ್ ಸುರೇಶಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.