ಶಕ್ತಿನಗರ: ಹಾರುಬೂದಿ ಹೊಂಡದಲ್ಲಿ ಸಮರ್ಪಕ ಸೌಲಭ್ಯಗಳು ನೀಡುವವರೆಗೂ, ಬೂದಿ ಸಾಗಣೆ ಮಾಡುವುದಿಲ್ಲ ಎಂದು ಬೂದಿ ಸಾಗಣೆ ಮಾಡುವ ಏಜೆನ್ಸಿಗಳ ಮಾಲೀಕರು ತಿಳಿಸಿದರು.
ಶಕ್ತಿನಗರದ ಆರ್ಟಿಪಿಎಸ್ ಮುಖ್ಯ ಕಾರ್ಯನಿರ್ವಹಕ ನಿರ್ದೇಶಕ ಕೆ.ವಿ.ವೆಂಕಟಚಲಾಪತಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಂಡರು.
‘ಲಾರಿಗಳ ಮೂಲಕ ಬೂದಿ ಸಾಗಣೆ ಮಾಡಲಾಗುತ್ತಿದ್ದು, ರಸ್ತೆಗಳ ಅಂಚಿನಲ್ಲಿ ಹಾರುಬೂದಿ ಬೀಳುತ್ತಿದೆ.ರಸ್ತೆಯಲ್ಲಿ ಓಡಾಡುವ ವಾಹನಗಳ ಸವಾರರಿಗೆ ಕಣ್ಣಿಗೆ ಬಿದ್ದು ಅಪಘಾತಗಳು ಸಂಭವಿಸಿವೆ. ಅಲ್ಲದೆ, ರಸ್ತೆ ಪಕ್ಕದಲ್ಲಿ ಇರುವ ಮನೆಗಳಲ್ಲಿ ಅಡುಗೆ ಪಾತ್ರೆಗಳಲ್ಲಿ ಬೀಳುತ್ತಿದೆ. ವಾಹನಗಳಿಗೆ ಬೂದಿ ಮೆತ್ತಿಕೊಳ್ಳುತ್ತಿದೆ. ಇದರಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ‘ ಎಂದು ಜಯ ಕರ್ನಾಟಕ ಸಂಘದ ತಾಲ್ಲೂಕು ಅಧ್ಯಕ್ಷ ಸುರೇಶ ಮಡಿವಾಳ, ಪ್ರಧಾನ ಕಾರ್ಯದರ್ಶಿ ರಾಜಸಾಬ್ ಅವರು ಅಧಿಕಾರಿಗಳ ಗಮನಕ್ಕೆ ತಂದರು.
ತೊಳೆದ ವಾಹನಗಳ ಗಾಲಿ(ಟೈರ್)ಯಲ್ಲಿ ಬೂದಿ ಮೆತ್ತಿಕೊಳ್ಳುತ್ತದೆ. ಇದರಿಂದಾಗಿ ರಸ್ತೆ ಅಂಚಿನಲ್ಲಿ ಬೂದಿ ಬೀಳುತ್ತಿದೆ. ಕೂಲಿ ಕಾರ್ಮಿಕರು ಇಲ್ಲದ ಪರಿಣಾಮ, ಸ್ವಚ್ಛತೆಗೆ ತೊಂದರೆ ಆಗಿದೆ.
ರಸ್ತೆ ಅಂಚಿನಲ್ಲಿ ಬೀಳುವ ಬೂದಿಯನ್ನು ಸ್ವಚ್ಛತೆ ಮಾಡಲು ಕೂಲಿ ಕಾರ್ಮಿಕರನ್ನು, ಆರ್ಟಿಪಿಎಸ್ ಅಧಿಕಾರಿಗಳು ನೇಮಿಸಬೇಕು. ಬೂದಿಯ ಹೊಂಡದ ರಸ್ತೆಯಲ್ಲಿ ಸಿಸಿ ರಸ್ತೆ ಮಾಡಬೇಕು. ಅಲ್ಲಿ ತನಕ ಬೂದಿ ಸಾಗಣೆ ಮಾಡುವುದಿಲ್ಲ ಎಂದು ಏಜೆನ್ಸಿಯ ಮಾಲೀಕರು ಸಭೆಯಲ್ಲಿ ನಿರ್ಣಯ ಕೈಗೊಂಡರು.
ಆರ್ಟಿಪಿಎಸ್ ಸಿವಿಲ್ ವಿಭಾಗದ ಮುಖ್ಯ ಎಂಜಿನಿಯರ್ ರಾಜಮುಡಿ, ಅಧಿಕಾರಿಗಳಾದ ರಾಜಶೇಖರ, ಪ್ರೇಮಲತಾ, ರವಿಕುಮಾರ, ಶಕ್ತಿನಗರ ಠಾಣೆಯ ಪಿಎಸ್ಐ ಎಚ್. ಹುಲಿಗೇಶ ಓಂಕಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.