
ಹಟ್ಟಿ ಚಿನ್ನದ ಗಣಿ: ‘ಸನಾತನ ಧರ್ಮದಲ್ಲಿ ಅಶ್ಪೃಷ್ಯತೆ ಎನ್ನುವುದೇ ಇರಲಿಲ್ಲ, ಅದು ಮಧ್ಯದಲ್ಲಿ ಬಂದಿದೆ. ಒಗಟ್ಟಾಗಿ ಇರಲು ಕೆಲವು ಕಾಣದ ಕೈಗಳು ಬಿಡುತ್ತಿಲ್ಲ’ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆಯ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಲಿಂಗಸುಗೂರು ತಾಲ್ಲೂಕಿನ ಗೆಜ್ಜಲಗಟ್ಟಾ ಗ್ರಾಮದಲ್ಲಿ ಮಾನಪ್ಪ ವಜ್ಜಲ್ ಕುಟುಂಬದವರು ಆಯೋಜಿಸಿದ್ದ ವೀರನಾಗಮ್ಮ ದೇವಿಯ ದೇವಸ್ಧಾನ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಭಾರತ ಮಾತಾಕೀ ಜೈ ಎಂದರೆ ಅದನ್ನು ಪ್ರಶ್ನೆ ಮಾಡುವಂತಹ ಜನರು ದೇಶದಲ್ಲಿ ಇದ್ದಾರೆ, ಇಂತವರನ್ನು ಗೌರವಿಸಬೇಕಾ’ ಎಂದು ಪ್ರಶ್ನಿಸಿದರು.
‘ಜೀವನ ಪದ್ಧತಿಯಿಂದ ಧರ್ಮವನ್ನು ಮುನ್ನೆಡೆಸಬೇಕು. ಆದರೆ, ಜಾತಿಯಿಂದ ಧರ್ಮವನ್ನು ನಡೆಸಬಾರದು. ಇದು ದೇಶಕ್ಕೆ ಆಪತ್ತು. ಧರ್ಮಕ್ಕೆ ಕಂಟಕವಾಗಿರುವ ಜನರಿಂದ ಯುವಕರು ಹಾಗೂ ಹಿಂದೂಗಳು ಜಾಗೃತರಿರಬೇಕು’ ಎಂದು ಹೇಳಿದರು.
ವಿಧಾನ ಪರಿಷತ್ತಿನ ವಿರೋದ ಪಕ್ಷದ ನಾಯಕ ಚಲುವಾದಿ ನಾರಾಯಣ ಸ್ವಾಮಿ ಮಾತನಾಡಿ, ‘ತಲೆಕೆಳಗಾದರೂ ಸರಿ ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಹಿಂದೂ ಧರ್ಮದಲ್ಲಿ ಜನಿಸಿ ಹಿಂದೂ ಧರ್ಮದ ವಿರುದ್ದ ಟೀಕೆ ಮಾಡುವ ಜನರಿಗೆ ಮುಂದಿನ ದಿನದಲ್ಲಿ ತಕ್ಕ ಪಠ ಕಲಿಸಲಿದ್ದಾರೆ‘ ಎಂದು ಎಚ್ಚರಿಸಿದರು.
ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ‘ಗೆಜ್ಜಲಗಟ್ಟಾ ಗ್ರಾಮದಲ್ಲಿ ವೀರನಾಗಮ್ಮ ದೇವಿಯ ಶಕ್ತಿ ಅಪಾರವಾಗಿದೆ. ಅದಕ್ಕಾಗಿ ಮೂರು ಭಾರಿ ಶಾಸಕನಾಗಿದ್ದೇನೆ. ದೇವಿಯ ಶಕ್ತಿಯಿಂದ ಈ ಗ್ರಾಮದಲ್ಲಿ ದೊಡ್ಡ ಮಟ್ಟಡ ದೇವಸ್ಧಾನ ನಿರ್ಮಾಣವಾಗಿದೆ ಜನರ ಪ್ರೀತಿ ಹಾರೈಕೆ ಸದಾ ವಜ್ಜಲ್ ಕುಟುಂಬದ ಮೇಲೆ ಸದಾ ಇರಲಿದೆ‘ ಎಂದರು.
ದೇವದುರ್ಗ ಶಾಸಕಿ ಜಿ,ಕರೆಮ್ಮ ನಾಯಕ ಮಾತನಾಡಿದರು. ನೂತನ ವೀರನಾಗಮ್ಮ ದೇವಿಯ ದೇವಸ್ಧಾನ ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು.
ಗೆಜ್ಜಲಗಟ್ಟಾ ಗ್ರಾಮದ 1111 ಮಹಿಳೆಯರು ವಜ್ಜಲ್ ಕುಂಟುಬದವರಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ಇಮ್ಮಿಡಿ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಮೂಕಾಂಬಿಕೆ ದೇವಸ್ಧಾನದ ನರಸಿಂಹ ಅಡಿಗ ಸಾನಿಧ್ಯ ವಹಿಸಿದ್ದರು.
ರಾಯಚೂರು ಶಾಸಕ ಶಿವರಾಜ ಪಾಟೀಲ್, ಮಸ್ಕಿ ತಾಲ್ಲೂಕಿನ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಯಶವಂತ, ಅಶೋಕ್ ಭೂಪಾಲ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಈಶ್ವರ ಎಂ ವಜ್ಜಲ್, ಬಸವಂತರಾಯ ಕುರಿ, ಎನ್ ಸ್ವಾಮಿ, ಶಂಕರಗೌಡ, ನಾಗಭೂಷಣ , ಸುರೇಶ ಗುಂಡಪ್ಪ ಕುರ್ಲಿ ಉಪಸ್ಧಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.