ADVERTISEMENT

ನಾಗಮೋಹನದಾಸ್ ವರದಿ ಜಾರಿಗೆ ತನ್ನಿ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 21 ಮೇ 2022, 4:51 IST
Last Updated 21 ಮೇ 2022, 4:51 IST
ಲಿಂಗಸುಗೂರಲ್ಲಿ ಶುಕ್ರವಾರ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಆಯೋಜಿಸಿದ್ದ ಪ್ರತಿಭಟನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಚಾಲನೆ ನೀಡಿದರು
ಲಿಂಗಸುಗೂರಲ್ಲಿ ಶುಕ್ರವಾರ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಆಯೋಜಿಸಿದ್ದ ಪ್ರತಿಭಟನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಚಾಲನೆ ನೀಡಿದರು   

ಲಿಂಗಸುಗೂರು: ‘ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿ ಪ್ರಮಣ ಹೆಚ್ಚಳ ಕುರಿತಂತೆ ನಿವೃತ್ತ ನ್ಯಾಯಮೂರ್ತಿ ಎಚ್‍.ಎನ್‍ ನಾಗಮೋಹನದಾಸ್‍ ಏಕಸದಸ್ಯ ಸಮಿತಿ ವರದಿ ಸಲ್ಲಿಸಿದ್ದು, ಯಥಾವತ್ತ ವರದಿ ಅನುಷ್ಠಾನಕ್ಕೆ ಸರ್ಕಾರ ಮುಂದಾಗಬೇಕು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‍ ಸಮಿತಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಒತ್ತಾಯಿಸಿದರು.

ಶುಕ್ರವಾರ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಪ್ರತಿಭಟನೆ ಚಾಲನೆ ನೀಡಿ ಮಾತನಾಡಿ, ‘ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಿ ಎರಡು ವರ್ಷಗಳಾದರೂ ಬಿಜೆಪಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ವಾಲ್ಮೀಕಿ ಗುರುಪೀಠದ ಸ್ವಾಮೀಜಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ಸ್ಪಂದನೆ ಸಿಗದಿರುವುದು ನೋವಿನ ಸಂಗತಿ’ ಎಂದರು.

ಪರಿಶಿಷ್ಟ ಜಾತಿಗೆ ಶೇ 15 ರಿಂದ ಶೇ 17ಕ್ಕೆ, ಪರಿಶಿಷ್ಟ ಪಂಗಡಕ್ಕೆ ಶೇ 3 ರಿಂದ ಶೇ 7.5ರಷ್ಟು ಮೀಸಲಾತಿ ಹೆಚ್ಚಿಸಬೇಕು. ಎಸ್‍ಸಿಪಿ, ಟಿಎಸ್‍ಪಿ ಕಾಯ್ದೆ 2013ರ ಕಲಂ 7(ಡಿ) ರದ್ದುಪಡಿಸಬೇಕು. ಪರಿಶಿಷ್ಟರ ಹೆಸರಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವವರ ಮತ್ತು ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.

ADVERTISEMENT

ಬ್ಯಾಕ್‍ ಲಾಗ್‍ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಯೋಧ್ಯೆ ರಾಮಮಂದಿರದಲ್ಲಿ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪಿಸಬೇಕು. ಕಮ್ಮಡದುರ್ಗ ರಾಜಧಾನಿ ಅಭಿವೃದ್ಧಿಪಡಿಸಬೇಕು. ರಾಜ್ಯದ ವಿಶ್ವ ವಿದ್ಯಾಲಯಗಳಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠಗಳ ಸ್ಥಾಪನೆ ಆಗಬೇಕು. ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಆರಂಭಿಸಬೇಕು. ವಿಶ್ವವಿದ್ಯಾಲಯವೊಂದಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಡಬೇಕು.

ಸಿಂಧೂರು ಲಕ್ಷ್ಮಣ ಹೆಸರಲ್ಲಿ ಪ್ರಾಧಿಕಾರ ರಚಿಸಬೇಕು. ಚಿತ್ರದುರ್ಗದಲ್ಲಿ ವೀರಮದಕರಿ ನಾಯಕ ಥೀಮ್‍ ಪಾರ್ಕ್ ನಿರ್ಮಿಸಬೇಕು. ಮೆಟ್ರೊ ರೈಲ್ವೆ ನಿಲ್ದಾಣಕ್ಕೆ ವೀರ ಮದಕರಿ ನಾಯಕರ ಹೆಸರು ನಾಮಕರಣ, ಮುಳಬಾಗಿಲು ಮಹರ್ಷಿ ವಾಲ್ಮೀಕಿ ಬೆಟ್ಟಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಉಪವಿಭಾಗಾಧಿಕಾರಿ ಕಚೇರಿ ಸಿಬ್ಬಂದಿ ಆದಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಶಾಸಕ ಡಿ.ಎಸ್‍ ಹೂಲಗೇರಿ, ಮುಖಂಡರಾದ ನಂದೇಶ ನಾಯಕ, ಗುಂಡಪ್ಪ ನಾಯಕ, ಡಿ.ಜಿ ಗುರಿಕಾರ, ಪಿಡ್ಡನಗೌಡ ನಾಯಕ, ಗೋವಿಂದ ನಾಯಕ, ಎಚ್‍.ಬಿ ಮುರಾರಿ, ಮುದಕಪ್ಪ ನಾಯಕ, ಪಾಮಯ್ಯ ಮುರಾರಿ, ಹುನಮಂತಪ್ಪ ಕುಣಿಕೆಲ್ಲೂರು, ಹುಲಗಪ್ಪ ನಾಯಕ, ಮೋಹನ ಗೋಸ್ಲೆ, ಪರಶುರಾಮ ನಗನೂರು, ಕುಪ್ಪಣ್ಣ ಹೊಸಮನಿ, ಹುಲಗಪ್ಪ ಕೆಸರಟ್ಟಿ, ಪ್ರಭುಲಿಂಗ ಮೇಗಳನವಿ ಸೇರಿದಂತೆ ಪ್ರಗತಿಪರ ಸಂಘಟನೆಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.