ರಾಯಚೂರು: ನಗರದಲ್ಲಿಪರಿಶಿಷ್ಟ ಜಾತಿ ಯೋಜನೆ ಹಾಗೂ ಪರಿಶಿಷ್ಟ ಪಂಗಡ ಯೋಜನೆ (ಎಸ್ಸಿಪಿ, ಟಿಎಸ್ಪಿ)ಗಾಗಿ ಬಿಡುಗಡೆ ಆಗಿರುವ ಅನುದಾನ ಬಳಕೆಯಲ್ಲಿ ಮಾರ್ಗಸೂಚಿ ಉಲ್ಲಂಘನೆ ಆಗಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ವಿರೂಪಾಕ್ಷಿ ಆರೋಪಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯಮ ಉಲ್ಲಂಘನೆಗಾಗಿ ಶಾಸಕ ಡಾ.ಶಿವರಾಜ ಪಾಟೀಲ, ಜಿಲ್ಲಾಧಿಕಾರಿ, ಎಂಜಿನಿಯರುಗಳ ವಿರುದ್ಧ ದೂರು ಸಲ್ಲಿಸುವ ಬಗ್ಗೆ ತಜ್ಞರೊಂದಿಗೆ ಚರ್ಚಿಸಲಾಗುತ್ತಿದೆ. ಶಾಸಕರು ತಮ್ಮ ರಾಜಕೀಯ ಪ್ರಭಾವದಿಂದ ಎಸ್ಸಿ–ಎಸ್ಟಿ ಗುತ್ತಿಗೆದಾರರ ಹಕ್ಕುಗಳಿಗೆ ಚ್ಯುತಿ ತಂದಿದ್ದಾರೆ ಎಂದರು.
ವಿವಿಧ ಕಾಮಗಾರಿಗಳನ್ನು ವಹಿಸುವುದಕ್ಕೆ ಶಾಸಕ ಡಾ.ಶಿವರಾಜ ಪಾಟೀಲ ಕಮಿಷನ್ ಪಡೆಯುತ್ತಿರುವುದನ್ನು ಸಾಬೀತುಪಡಿಸಲು ಸಿದ್ಧನಿದ್ದೇನೆ. ಅದು ಸಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಿದ್ದಾರೆಯೇ? ಎಂದು ಸವಾಲು ಹಾಕಿದರು.
ನಗರೋತ್ಥಾನ, ಕೆಬಿಜೆಎನ್ಎಲ್, ವಿವೇಚನಾ ಅನುದಾನದ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ಕಾಗಾರಿಗಳನ್ನು ನಿರ್ವಹಿಸದೆ ಹಣ ಪಡೆಯಲಾಗಿದೆ. ಸಹೋದರ ಮತ್ತು ಬೆಂಬಲಿಗರಿಗೆ ಉಪಗುತ್ತಿಗೆ ವಹಿಸುತ್ತಿದ್ದಾರೆ. ಕಾಮಗಾರಿಗಳನ್ನು ನಿರ್ವಹಿಸದ ಕಾರಣದಿಂದಲೇ ಈಚೆಗೆ ವಿವಿಧ ಬಡಾವಣೆಗಳ ಮನೆಗಳಿಗೆ ನೀರು ನುಗ್ಗುವುದಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಮುಖಂಡರಾದ ಎಂ.ಪವನಕುಮಾರ್, ವಿಶ್ವನಾಥ ಪಟ್ಟಿ, ಆದಿರಾಜ, ರಾಮಕೃಷ್ಣ, ಅಕ್ಬರ್ ಹುಸೇನ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.