
ಸಿಂಧನೂರು: ಫೆ.13 ಮತ್ತು 14ರಂದು ತಾಲ್ಲೂಕಿನ ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಾಗೂ ಸಿದ್ದಲಿಂಗ ಸ್ವಾಮೀಜಿಯ ಗುರುವಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀಮಠದ ಮಹಾಲಿಂಗ ಮಹಾಸ್ವಾಮಿ ತಿಳಿಸಿದ್ದಾರೆ.
ಸೋಮವಾರ ಹೇಳಿಕೆ ನೀಡಿರುವ ಅವರು,‘ಫೆ.13ರಂದು ಸಂಜೆ 7ಕ್ಕೆ ನಡೆಯುವ ರೈತರ ಹಿತ ಚಿಂತನ ಗೋಷ್ಠಿಯ ಸಾನ್ನಿಧ್ಯವನ್ನು ಕನಕಗಿರಿ ಸುವರ್ಣಗಿರಿ ವಿರಕ್ತಮಠದ ಡಾ.ಚನ್ನಮಲ್ಲ ಸ್ವಾಮೀಜಿ ವಹಿಸುವರು. ಚಿಕಲಪರ್ವಿ ರುದ್ರಮುನೇಶ್ವರ ಮಠದ ಸದಾಶಿವ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಕರೇಗುಡ್ಡ ಮಹಾಂತಲಿಂಗ ಶಿವಾಚಾರ್ಯರು ನೇತೃತ್ವ ವಹಿಸುವರು. ಶಾಸಕ ಹಂಪನಗೌಡ ಬಾದರ್ಲಿ ಕಾರ್ಯಕ್ರಮ ಉದ್ಘಾಟಿಸುವರು’ ಎಂದಿದ್ದಾರೆ.
‘ಜೀವಮಾನ ಸಾಧನೆಗಾಗಿ ಡಿ.ಎಸ್.ಕಲ್ಮಠ ವಕೀಲ, ಸಾವಯವ ಕೃಷಿ ಪ್ರಶಸ್ತಿಗೆ ಕೆ.ರಾಮನಗೌಡ ಮಾಲಿ ಪಾಟೀಲ, ಸಮಾಜ ಸೇವೆ ಪ್ರಶಸ್ತಿಗೆ ಚನ್ನಬಸವ ಹರಟೇನೂರು ಭಾಜನರಾಗಿದ್ದು, ಅಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ವಿವರಿಸಿದ್ದಾರೆ.
‘ಫೆ.14ರಂದು ಸಂಜೆ ಸಿದ್ದಲಿಂಗ ಶಿವಯೋಗಿಗಳ ರಥೋತ್ಸವ ನಡೆಯಲಿದೆ. ನಂತರ ನಡೆಯುವ ಗುರುವಂದನಾ ಹಾಗೂ ಧಾರ್ಮಿಕ ಚಿಂತನಾಗೋಷ್ಠಿಯ ಸಾನ್ನಿಧ್ಯವನ್ನು ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ವಹಿಸುವರು. ಶಹಾಪುರದ ಗುರುಪಾದ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಉಗರಗೊಳ ಮಹಾಂತ ಸ್ವಾಮೀಜಿ, ವಳಬಳ್ಳಾರಿ ಶ್ರೀಮಠದ ಬಸವಲಿಂಗ ಸ್ವಾಮೀಜಿ, ಅಂಕುಶದೊಡ್ಡಿ ವಾಮದೇವ ಶಿವಾಚಾರ್ಯ ಸ್ವಾಮೀಜಿ, ತುರ್ವಿಹಾಳದ ಅಮರಗುಂಡ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸಿದ್ದಾರೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.