ADVERTISEMENT

ಸಿಂಧನೂರು | ಒಳ ಮೀಸಲಾತಿ ಆಧರಿಸಿ ಖಾಲಿ ಹುದ್ದೆ ಭರ್ತಿ ಮಾಡಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 4:38 IST
Last Updated 4 ಮಾರ್ಚ್ 2026, 4:38 IST
ಸಿಂಧನೂರಿನಲ್ಲಿ ಒಳ ಮೀಸಲಾತಿ ಐಕ್ಯತಾ ಹೋರಾಟ ಸಮಿತಿಯಿಂದ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಮನವಿ ಸಲ್ಲಿಸಿದರು
ಸಿಂಧನೂರಿನಲ್ಲಿ ಒಳ ಮೀಸಲಾತಿ ಐಕ್ಯತಾ ಹೋರಾಟ ಸಮಿತಿಯಿಂದ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಮನವಿ ಸಲ್ಲಿಸಿದರು   

ಸಿಂಧನೂರು: ‘ಒಳ ಮೀಸಲಾತಿ ಆಧರಿಸಿ ರಾಜ್ಯದಲ್ಲಿ ಖಾಲಿಯಿರುವ 56,342 ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ಆಗ್ರಹಿಸಿ ಒಳ ಮೀಸಲಾತಿ ಐಕ್ಯತಾ ಹೋರಾಟ ಸಮಿತಿ ತಾಲ್ಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು. 

ಇಲ್ಲಿನ ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದ ಮೂಲಕ ಮಿನಿವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.

‘ಒಳ ಮೀಸಲಾತಿ ಅನ್ವಯಿಸದೇ ನೇಮಕಾತಿ ಮಾಡಲು ಸೂಚಿಸಿರುವುದು ಮಾದಿಗ ಸಮುದಾಯದ 35 ವರ್ಷಗಳ ದೀರ್ಘ ಹೋರಾಟಕ್ಕೆ ಮಾಡಿದ ದೊಡ್ಡ ಅನ್ಯಾಯ ಮತ್ತು ನಂಬಿಕೆ ದ್ರೋಹವಾಗಿದೆ. 56,342 ಖಾಲಿ ಹುದ್ದೆಗಳ ಭರ್ತಿಗೆ ಒಳ ಮೀಸಲಾತಿಯ ಶೇ 15ರಷ್ಟು ಹಂಚಿಕೆಯನ್ನು ಸ್ಪಷ್ಟವಾಗಿ ಅನ್ವಯಿಸಬೇಕು. ಉಪ ಗುಂಪುಗಳವಾರು ಹಂಚಿಕೆ ಹಾಗೂ ಪರಿಷ್ಕೃತ ರೋಸ್ಟರ್ ಜಾರಿಗೊಳಿಸಬೇಕು. ಕಾನೂನು ಸಮರ್ಥನೆಗಳೊಂದಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು’ ಎಂದು ಹಿರಿಯ ಹೋರಾಟಗಾರ ಆರ್.ಬೋನ್‍ವೆಂಚರ್ ಆಗ್ರಹಿಸಿದರು.

ADVERTISEMENT

ನ್ಯಾ.ನಾಗಮೋಹನ ದಾಸ್ ವರದಿಯ ಆಧಾರದ ಮೇಲೆ ಪರಿಶಿಷ್ಟ ಜಾತಿಗಳನ್ನು ಗ್ರೂಪ್ ಎ, ಬಿ, ಸಿ ಎಂದು ವರ್ಗೀಕರಿಸಲಾಗಿದೆ. ಒಳ ಮೀಸಲಾತಿ ಉಪ ವರ್ಗೀಕರಣವನ್ನು ಜಾರಿಗೊಳಿಸಬೇಕು. ಶೇ 56 ರಷ್ಟು ಮೀಸಲಾತಿ ವ್ಯವಸ್ಥೆಯನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಲು ಅಗತ್ಯ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

‘ಶೇ 56ರಷ್ಟು ಮೀಸಲಾತಿ ಪ್ರಮಾಣವನ್ನು ನ್ಯಾಯಾಲಯದ ಮುಂದೆ ದೃಢವಾಗಿ ಸಮರ್ಥಿಸಬೇಕು. ನಾಗಮೋಹನ ದಾಸ್ ವರದಿ ಪ್ರಕಾರ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕವಾಗಿ ಶೇ 1ರಷ್ಟು ಮೀಸಲಾತಿ ನೀಡಬೇಕು. ಇಲ್ಲವೇ ಆ ಸಮುದಾಯಗಳನ್ನು ಎ ಕೆಟಗರಿಗೆ ಸಂಬಂಧಿಸಿದ ಮಾದಿಗ ಸಂಬಂಧಿತ ಜಾತಿಗಳ ಪಟ್ಟಿಗೆ ಸೇರಿಸಬೇಕು. ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟು ಪರಿಶಿಷ್ಟ ಜಾತಿಗಳಿಗೆ ಶೇ 2 ಹಾಗೂ ಪರಿಶಿಷ್ಟ ಪಂಗಡಗಳಿಗೆ ಶೇ 4ರಷ್ಟು ಹುದ್ದೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ಭರ್ತಿ ಮಾಡುವ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು’ ಎಂದರು.

‘ಈ ಹಕ್ಕೊತ್ತಾಯಗಳಿಗೆ ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ, ಮಾದಿಗ ಸಮುದಾಯದಿಂದ ರಾಜ್ಯದಾದ್ಯಂತ ತೀವ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಕರ್ನಾಟಕ ಮಾದರ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ ಗಿರಿಜಾಲಿ ಎಚ್ಚರಿಕೆ ನೀಡಿದರು.

ಮಾದಿಗ ಸಮುದಾಯದ ಮುಖಂಡರಾದ ಮಹಾದೇವಪ್ಪ ಧುಮತಿ, ಮೌನೇಶ ಜಾಲವಾಡಗಿ, ಕೆ.ಮರಿಯಪ್ಪ ಬಿಎಸ್‌ಪಿ, ಹನುಮಂತಪ್ಪ ಹಂಪನಾಳ, ಪ್ರವೀಣಕುಮಾರ ಧುಮತಿ, ಹಸೇನಪ್ಪ ಸೂಲಂಗಿ ಮಾತನಾಡಿದರು.

ಮುಖಂಡರಾದ ಅಶೋಕ ಮ್ಯಾಗಳಮನಿ, ಹುಸೇನಪ್ಪ ಶ್ರೀಪುರಂ ಜಂಕ್ಷನ್, ಸುರೇಶ ಎಲೆಕೂಡ್ಲಿಗಿ, ದುರುಗೇಶ ಬಾಲಿ, ಯಲ್ಲಪ್ಪ ಯದ್ದಲದೊಡ್ಡಿ, ವೀರೇಶ ಉಪ್ಪಲದೊಡ್ಡಿ, ಶಿವರಾಜ ಉಪ್ಪಲದೊಡ್ಡಿ, ದುರುಗೇಶ ಕಲಮಂಗಿ, ಈರಣ್ಣ ಸುಲ್ತಾನಪುರ, ಹನುಮಂತಪ್ಪ, ಮಲ್ಲಿಕಾರ್ಜುನ ಕುರುಗೋಡು, ಹನುಮೇಶ ಮೈತ್ರಿ, ಶಿವರಾಜ ಬಾಗಲವಾಡ, ಜಂಬಣ್ಣ, ಆಲಂಬಾಷಾ ಬೂದಿವಾಳ, ರಮೇಶ ಹಲಗಿ, ಶಶಿಕುಮಾರ, ಬಸವರಾಜ ಕರಬ್‍ದಿನ್ನಿ, ವಿಜಯಕುಮಾರ, ಉಮೇಶ, ಮುತ್ತುಸಾಗರ್ ಭಾಗವಹಿಸಿದ್ದರು.

ಮಾದಿಗ ಸಮಾಜಕ್ಕೆ ಅನ್ಯಾಯ: ಆರೋಪ ಶೇ 56ರಷ್ಟು ಮೀಸಲಾತಿ ವ್ಯವಸ್ಥೆ ಜಾರಿಗೊಳಿಸಿ ಅಲೆಮಾರಿ ಸಮುದಾಯಕ್ಕೆ ಶೇ 1ರಷ್ಟು ಮೀಸಲಾತಿ ನೀಡಿ

ಈ ಹಕ್ಕೊತ್ತಾಯಗಳಿಗೆ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಮಾದಿಗ ಸಮುದಾಯದಿಂದ ರಾಜ್ಯದಾದ್ಯಂತ ತೀವ್ರ ಹೋರಾಟ ನಡೆಸಬೇಕಾಗುತ್ತದೆ
ವೆಂಕಟೇಶ ಗಿರಿಜಾಲಿ ತಾಲ್ಲೂಕು ಅಧ್ಯಕ್ಷ ಕರ್ನಾಟಕ ಮಾದರ ಮಹಾಸಭಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.