
ಸಿಂಧನೂರು: ನಗರದ ಎಪಿಎಂಸಿಯಲ್ಲಿ ವಿರೂಪಾಪುರ ಮತ್ತು ನಟರಾಜ ಕಾಲೊನಿಯ ಕೆಲ ಯುವಕರ ನಡುವೆ ಇಸ್ಪೀಟ್ ಜೂಜಾಟದಲ್ಲಿ ನಡೆದ ವಿವಾದ ವಿಕೋಪಕ್ಕೆ ತಿರುಗಿ ಗುಂಪು ಘರ್ಷಣೆಯಾಗಿ ಮಾರ್ಪಟ್ಟಿದೆ.
ಘಟನೆಯಲ್ಲಿ ಪಿ.ಮಲ್ಲಿಕಾರ್ಜುನ ಕುರುಕುಂದಿ, ಶಿವರಾಜ ಪಾಟೀಲ ಗುಂಜಳ್ಳಿ, ಪಂಪನಗೌಡ, ರಾಯಪ್ಪ, ಮಂಜುನಾಥ ಎಂಬುವವರ ತಲೆಗೆ ತೀವ್ರ ಪೆಟ್ಟಾಗಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಜಗಳ ಬಿಡಿಸಲು ಹೋಗಿದ್ದ ಕೆಲವರು ಗಾಯಗೊಂಡಿದ್ದು ಅದರಲ್ಲಿ ಮಲ್ಲಿಕಾರ್ಜುನ ಒಬ್ಬರಾಗಿದ್ದಾರೆ ಎಂದು ತಿಳಿದು ಬಂದಿದೆ.
ಒಂದು ಗುಂಪಿನ ನಾಯಕತ್ವವನ್ನು ಶಿವರಾಜ ಪಾಟೀಲ ಗುಂಜಳ್ಳಿ ವಹಿಸಿಕೊಂಡಿದ್ದು, ತಮ್ಮ ಸಹೋದರನ ಪುತ್ರನಿಗೆ ಹಲ್ಲೆ ಮಾಡಿದ್ದಾನೆ ಎಂದು ನಗರಸಭೆ ಸದಸ್ಯ ಪಿ.ಸಣ್ಣವೀರಭದ್ರಪ್ಪ ಕುರುಕುಂದಿ ಅವರು ಸ್ಥಳಕ್ಕೆ ತೆರಳಿದ್ದರಿಂದ ಶಿವರಾಜ ಪಾಟೀಲ ಮತ್ತು ಸಣ್ಣವೀರಭದ್ರಪ್ಪ ಅವರ ನಡುವೆಯೂ ಮಾರಾಮಾರಿ ನಡೆದಿದೆ ಎಂದು ಹೇಳಲಾಗಿದೆ.
ಘಟನೆಯನ್ನು ತಿಳಿಗೊಳಿಸಲು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ ಪ್ರಯತ್ನಿಸುತ್ತಿದ್ದಾರೆ.
‘ಇಲ್ಲಿಯ ವರೆಗೆ ಪೊಲೀಸ್ ಠಾಣೆಗೆ ಯಾವುದೇ ದೂರು ಬಂದಿರುವುದಿಲ್ಲ. ಆದರೂ ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಸ್ವಯಂ ಸ್ಪೂರ್ತಿಯಿಂದ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ಪೊಲೀಸ್ ಇನ್ಸ್ಪೆಕ್ಟರ್ ವೀರಾರೆಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.