
ಕವಿತಾಳ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ಮುಖ್ಯ ರಸ್ತೆ ಸೇರಿದಂತೆ ಓಣಿಗಳಲ್ಲಿ ಗುಂಪು ಗುಂಪಾಗಿ ನಾಯಿಗಳು ದಾಂಗುಡಿ ಇಡುತ್ತಿದ್ದು, ಮಹಿಳೆಯರು, ಮಕ್ಕಳು ಭಯದಲ್ಲಿ ಓಡಾಡುವಂತಾಗಿದೆ.
ಇಲ್ಲಿನ ಹುಸೇನಪುರ ಕ್ರಾಸ್ ಹತ್ತಿರ ಪಟ್ಟಣ ಪಂಚಾಯಿತಿ ತ್ಯಾಜ್ಯ ಸಂಗ್ರಹ ಸ್ಥಳದ ಸುತ್ತಮುತ್ತ ಸೇರುವ ಬೀದಿ ನಾಯಿ ಹಿಂಡು ಇದ್ದಕ್ಕಿದ್ದಂತೆ ಮುಖ್ಯ ರಸ್ತೆಗೆ ಓಡಿ ಬರುತ್ತದೆ. ಹೀಗಾಗಿ ಬೈಕ್ ಸವಾರರು ಆಯ ತಪ್ಪಿ ಬೀಳುತ್ತಿದ್ದಾರೆ.
ಆನ್ವರಿ ಕ್ರಾಸ್ನಲ್ಲಿ ಹೋಟೆಲ್ ಮತ್ತು ಮಾಂಸ ಮಾರಾಟ ಮಳಿಗೆಗಳ ಹತ್ತಿರ ಜಮಾಯಿಸಿ ರಸ್ತೆಗೆ ಅಡ್ಡ ಬರುವ ಕಾರಣ ವಾಹನ ಸವಾರರ ಪ್ರಾಣಕ್ಕೆ ಕಂಟಕ ಎದುರಾಗಿದೆ. ವರಲಕ್ಷ್ಮೀ ಬಡಾವಣೆಯಲ್ಲಿ ಹಗಲು–ರಾತ್ರಿ ಹಿಂಡು ಹಿಂಡಾಗಿ ಓಡಾಡುವ ಬೀದಿ ನಾಯಿಗಳ ಹಾವಳಿಯಿಂದ ಮಹಿಳೆಯರು ಮತ್ತು ಮಕ್ಕಳು ಓಡಾಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ರಾತ್ರಿ ಕೆಟ್ಟದಾಗಿ ಬೊಗಳುವ ನಾಯಿಗಳಿಂದ ನೆಮ್ಮದಿಯಾಗಿ ನಿದ್ರೆ ಮಾಡದಂತಾಗಿದೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದರು.
‘ಸಾಕು ನಾಯಿಗಳನ್ನು ಕೆಲವರು ರಸ್ತೆಗೆ ಬಿಡುತ್ತಿದ್ದು, ಬೀದಿ ನಾಯಿಗಳ ಜೊತೆ ಸೇರುವ ಅವುಗಳು ಪಾದಾಚಾರಿಗಳ ಮೇಲೆ ದಾಳಿ ಮಾಡುತ್ತಿವೆ ಮತ್ತು ಪರಸ್ಪರ ಕಚ್ಚಾಡಿ ವಾಹನಗಳಿಗೆ ಅಡ್ಡ ಬರುತ್ತಿವೆ. ಈ ಬಗ್ಗೆ ಸ್ಥಳೀಯ ಆಡಳಿತ ಗಮನ ಹರಿಸಬೇಕು. ಬೀದಿ ನಾಯಿಗಳ ನಿಯಂತ್ರಣಕ್ಕೆ ಅವುಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಬೇಕು. ನಾಯಿ ಸಾಕಿದ ಮಾಲೀಕರಿಗೆ ಅವುಗಳಿಗೆ ರೆಬೀಸ್ ಚುಚ್ಚುಮದ್ದು ಹಾಕಿಸಲು ಸೂಚಿಸಬೇಕು’ ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮೌನೇಶ ಹಿರೇಕುರಬರ ಒತ್ತಾಯಿಸಿದರು.
ಬೀದಿ ನಾಯಿ ನಿಯಂತ್ರಣದ ಕುರಿತು ಇತ್ತೀಚೆಗೆ ನ್ಯಾಯಾಲಯ ನೀಡಿದ ಆದೇಶ ನೋಡಿಕೊಂಡು ಕ್ರಮ ಕೈಗೊಳ್ಳಲಾಗುವುದು. ಸಂತಾನ ಶಕ್ತಿ ಹರಣ ಚಿಕಿತ್ಸೆ ಸಾಧ್ಯತೆ ಕುರಿತು ಪರಿಶೀಲಿಸಲಾಗುವುದುಜಸ್ಪಾಲ್ ಸಿಂಗ್ ಮುಖ್ಯಾಧಿಕಾರಿ ಪ.ಪಂ ಕವಿತಾಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.