ರಾಯಚೂರು: ತಾಲ್ಲೂಕಿನ ಬೀಜನಗೇರಾ ಗ್ರಾಮದಲ್ಲಿ 20 ಬೀದಿನಾಯಿಗಳು ಕುರಿದೊಡ್ಡಿಯ ಮೇಲೆ ಸೋಮವಾರ ದಾಳಿ ನಡೆಸಿ, 120 ಕುರಿಮರಿಗಳನ್ನು ಕಚ್ಚಿ ಸಾಯಿಸಿವೆ.
ಎರಡೂವರೆ ತಿಂಗಳೊಳಗಿನ ಕುರಿಗಳನ್ನು ದೊಡ್ಡಿಯಲ್ಲಿ ಮೇಯುವುದಕ್ಕೆ ಬಿಡಲಾಗಿತ್ತು. ದೊಡ್ಡ ಕುರಿಗಳನ್ನು ಹೊರಗಡೆ ಮೇಯಿಸುವುದಕ್ಕೆ ತೆಗೆದುಕೊಂಡು ಹೋಗಿದ್ದ ವೇಳೆಯಲ್ಲಿ ಮರಿಗಳ ಮೇಲೆ ನಾಯಿಗಳು ದಾಳಿ ಮಾಡಿವೆ.
ತಾಯಪ್ಪ, ನಸರಣ್ಣ, ವೆಂಕಟೇಶ ಹಾಗೂ ಮುದ್ದಪ್ಪ ಅವರು ಈ ಕುರಿಮರಿಗಳನ್ನು ಸಾಕಾಣಿಕೆ ಮಾಡಿದ್ದರು.
‘ಗ್ರಾಮದಲ್ಲಿ ಕೋಳಿ ಫಾರಂಗಳಿದ್ದು, ಅಲ್ಲಿ ಎಸೆಯುವ ತ್ಯಾಜ್ಯವನ್ನು ತಿನ್ನುವುದಕ್ಕಾಗಿ ಬೀದಿನಾಯಿಗಳು ಮುಗಿಬೀಳುವುದು ಸಾಮಾನ್ಯವಾಗಿತ್ತು. ಕುರಿದೊಡ್ಡಿ ಬಾಗಿಲಿಗೆ ಕಟ್ಟಿದ್ದ ಹಗ್ಗವನ್ನು ನಾಯಿಗಳು ಕತ್ತರಿಸಿ, ಒಳಗೆ ನುಗ್ಗಿವೆ’ ಎಂದು ತಾಯಪ್ಪ ತಿಳಿಸಿದರು.
‘ಮಾರ್ಕೆಟ್ನಲ್ಲಿ ಈ ಕುರಿಮರಿಗಳನ್ನು ತಲಾ ₹4 ಸಾವಿರ ಕೊಟ್ಟು ಖರೀದಿಸುತ್ತಿದ್ದರು. ಈಗ ಬಹುತೇಕ ಕುರಿಮರಿಗಳನ್ನು ನಾಯಿಗಳು ಕಚ್ಚಿದ್ದರಿಂದ ಕೆಲವು ಸಂಪೂರ್ಣ ಸತ್ತುಬಿದ್ದಿವೆ. ಅರ್ಧ ಕಚ್ಚಿದ್ದರಿಂದ ಕೆಲವು ಮರಿಗಳು ಬಿಕ್ಕುತ್ತಿವೆ’ ಎಂದು ಅಳಲು ತೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.