ಸಿರವಾರ: ‘ರಸಗೊಬ್ಬರ, ಕೀಟನಾಶಕ, ಬೀಜಗಳನ್ನು ಅಕ್ರಮವಾಗಿ ದಾಸ್ತಾನು ಮಾಡವುದಾಗಲಿ, ಅಧಿಕ ದರಕ್ಕೆ ಮಾರಾಟ ಮಾಡುವುದಾಗಲಿ ಕಂಡುಬಂದಲ್ಲಿ ಅಂತಹ ಮಾರಾಟ ಮಳಿಗಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಮಲ್ಲಟ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಾರುತಿ ಯರಗಲ್ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಮಲ್ಲಟ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ನೂಗಡೋಣಿ, ಎನ್. ಹೊಸೂರ, ಬಲ್ಲಟಗಿ, ಬಸವಣ್ಣ ಕ್ಯಾಂಪ್ ಮತ್ತು ಬಾಗಲವಾಡ ಗ್ರಾಮಗಳಲ್ಲಿನ ರಸಗೊಬ್ಬರ, ಕೀಟನಾಶಕ ಮಾರಾಟ ಮಳಿಗೆಗಳಿಗೆ ಬುಧವಾರ ಭೇಟಿ ನೀಡಿ ದಾಸ್ತಾನು ಪರಿಶೀಲನೆ ನಡೆಸಿ ಮಾತನಾಡಿದರು.
‘ರಸಗೊಬ್ಬರ ಅಗತ್ಯ ವಸ್ತುಗಳ ಕಾಯ್ದೆಯಡಿ ಬರುವುದರಿಂದ, ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು, ಅಕ್ರಮ ದಾಸ್ತಾನು ಮಾಡುವುದು, ಅವಧಿ ಮೀರಿದ, ಬೀಜ ಹಾಗೂ ಕೀಟನಾಶಕಗಳ ಮಾರಾಟ, ನಿಷೇಧಿತ ಬಯೋ ಕೀಟನಾಶಕಗಳ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ನಿತ್ಯವೂ ದಾಸ್ತಾನು ಫಲಕ (ಸ್ಟಾಕ್ ಬೋರ್ಡ್) ಬರೆಯಬೇಕು. ರೈತರಿಗೆ ಖರೀದಿಯ ರಶೀದಿ ನೀಡುವುದು ಕಡ್ಡಾಯವಾಗಿದೆ’ ಎಂದು ತಾಕೀತು ಮಾಡಿದರು.
ಕೃಷಿ ವ್ಯವಸ್ಥಾಪಕ ನಾಗರಾಜ ಕಂಬಾರ, ಆಂಜನೇಯ, ಕೃಷಿ ಮಿತ್ರರು ಹಾಗೂ ಅಂಗಡಿ ಮಾಲೀಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.