ಕವಿತಾಳ ಪೊಲೀಸ್ ಠಾಣೆಗೆ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿ ಸೈಯದ್ ಮಹ್ಮದ್ ಹುಸೇನ್ ಭೇಟಿ ನೀಡಿ ಪರಿಶೀಲಿಸಿದರು
ಕವಿತಾಳ: ಕೇಂದ್ರ ಗೃಹ ಸಚಿವಾಲಯದ ಅಧಿಕಾರಿ ಸೈಯದ್ ಮಹ್ಮದ್ ಹುಸೇನ್ ಅವರು ಪಟ್ಟಣದ ಪೊಲೀಸ್ ಠಾಣೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಕೇಂದ್ರ ಸರ್ಕಾರದ ಅತ್ಯುತ್ತಮ ಪೊಲೀಸ್ ಠಾಣೆ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡುವ ನಿಟ್ಟಿನಲ್ಲಿ ಭೇಟಿ ನೀಡಿದ ಅವರು ಪೊಲೀಸ್ ಠಾಣೆಯ ಕಟ್ಟಡ, ವಿಶ್ರಾಂತಿ ಕೊಠಡಿ, ಗ್ರಂಥಾಲಯ, ಆವರಣ ಸೇರಿ ವಿವಿಧೆಡೆ ಪರಿಶೀಲಿಸಿದರು. ದಾಖಲೆಗಳ ನಿರ್ವಹಣೆ ಕುರಿತು ಮಾಹಿತಿ ಪಡೆದರು.
ಮಹಿಳಾ ದೂರುದಾರರಿಂದ ದೂರು ಸ್ವೀಕೃತಿ, ಪ್ರಕರಣ ದಾಖಲು, ಠಾಣೆಗೆ ಬರುವ ಸಾರ್ವಜನಿಕರಿಗೆ ಠಾಣಾಧಿಕಾರಿ ಮತ್ತು ಸಿಬ್ಬಂದಿಯ ಸ್ಪಂದನೆ, ಬಾಲ್ಯ ವಿವಾಹ, ಮಕ್ಕಳ ಮೇಲಿನ ದೌರ್ಜನ್ಯ ತಡೆ, ಉತ್ತಮ ಪರಿಸರ, ಸ್ವಚ್ಛತೆ, ಮೂಲ ಸೌಕರ್ಯ ಲಭ್ಯತೆ ಸೇರಿದಂತೆ ಜನಸ್ನೇಹಿ ವ್ಯವಸ್ಥೆ ಕುರಿತು ಮಾಹಿತಿ ಸಂಗ್ರಹಿಸಿದರು.
ಕೆಲವು ಅಂಗಡಿಗಳಿಗೆ ಭೇಟಿ ನೀಡಿದ ಅವರು ಸ್ಥಳೀಯ ಪೊಲೀಸ್ ಅಧಿಕಾರಿಗಳ ಸ್ಪಂದನೆ, ತುರ್ತು ಸಂದರ್ಭಗಳಲ್ಲಿ ಕ್ರಮ ಕೈಗೊಳ್ಳುವಲ್ಲಿ ತೋರುವ ಕಾಳಜಿ ಕುರಿತು ವರ್ತಕರು ಮತ್ತು ಸಾರ್ವಜನಿಕರೊಂದಿಗೆ ಚರ್ಚಿಸಿದರು.
‘ಪ್ರಾಥಮಿಕ ಹಂತದಲ್ಲಿ ಪ್ರಶಸ್ತಿಗೆ ಪರಿಗಣಿಸಿದ 78 ಪೊಲೀಸ್ ಠಾಣೆಗಳ ಪಟ್ಟಿಯಲ್ಲಿ ರಾಜ್ಯದ ಕವಿತಾಳ, ಬಳಗಾನೂರು ಮತ್ತು ಬಳ್ಳಾರಿ ಜಿಲ್ಲೆಯ ಸಿರಗೇರಿ ಠಾಣೆಗಳಿವೆ. ದಾಖಲೆ ಮತ್ತು ವಾಸ್ತವಿಕ ವರದಿ ಆಧರಿಸಿ 10 ಠಾಣೆಗಳಿಗೆ ಪ್ರಶಸ್ತಿ ನೀಡಲಾಗುವುದು’ ಎಂದು ಮೌಲ್ಯಮಾಪಕ ಸೈಯದ್ ಮಹ್ಮದ್ ಹುಸೇನ್ ತಿಳಿಸಿದರು.
ರಾಯಚೂರು ಸಿಎನ್ಎನ್ ಠಾಣೆಯ ಡಿವೈಎಸ್ಪಿ ವೆಂಕಟೇಶ, ಸಿರವಾರ ಸಿಪಿಐ ಎಂ.ಶಶಿಕಾಂತ, ಪಿಎಸ್ಐ ಗುರುಚಂದ್ರ ಯಾದವ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.