ದೇವದುರ್ಗ ತಾಲ್ಲೂಕಿನ ಕಾಕರಗಲ್ ಟೋಲ್ಗೇಟ್ನಲ್ಲಿ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ ತಮ್ಮ ಬೆಂಬಲಿಗರೊಂದಿಗೆ ಧರಣಿ ನಡೆಸಿದ್ದಾರೆ
ದೇವದುರ್ಗ (ರಾಯಚೂರು ಜಿಲ್ಲೆ): ಕಲ್ಮಲಾ – ತಿಂಥಣಿ ಬ್ರಿಜ್ ರಾಜ್ಯ ಹೆದ್ದಾರಿ ಮೇಲೆ 40 ಕಿ ಮೀ ಅಂತರದಲ್ಲಿ ಸ್ಥಾಪಿಸಿದ ಎರಡು ಟೋಲ್ ಗೇಟ್ಗಳಲ್ಲಿ ಟೋಲ್ ಸಂಗ್ರಹ ರದ್ದು ಮಾಡಬೇಕು ಎಂದು ಒತ್ತಾಯಿಸಿ ದೇವದುರ್ಗ ತಾಲ್ಲೂಕಿನ ಕಾಕರಗಲ್ ಟೋಲ್ಗೇಟ್ನಲ್ಲಿ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ ಅಹೋರಾತ್ರಿ ಧರಣಿ ನಡೆಸಿದ್ದಾರೆ.
ಜುಲೈ 18 ರಂದು ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಟೋಲ್ ಗೇಟ್ ರದ್ದುಪಡಿಸುವಂತೆ ಒತ್ತಾಯಿಸಿ ಧರಣಿ ನಡೆಸಿದ್ದರು. ಉಸ್ತುವಾರಿ ಸಚಿವ ಟೋಲ್ ಸಂಗ್ರಹ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ನಿತೀಶ್ ಅವರಿಗೆ ಸೂಚಿಸಿದ್ದರು.
ಕರೆಮ್ಮ ನಾಯಕ ಅವರು ರಾಯಚೂರಲ್ಲಿ ಸಭೆ ಮುಗಿಸಿ ದೇವದುರ್ಗಕ್ಕೆ ತೆರಳುತ್ತಿದ್ದಾಗ ಟೋಲ್ ಸಂಗ್ರಹ ಸ್ಥಗಿತಗೊಳಿಸಿರಲಿಲ್ಲ. ಹೀಗಾಗಿ ಕಾರ್ಯಕರ್ತರೊಂದಿಗೆ ರಸ್ತೆ ಮೇಲೆ ಕುಳಿತು ಅಹೋ ರಾತ್ರಿಯ ಧರಣಿ ನಡೆಸಿದರು. ಟೋಲ್ಗೇಟ್ನಲ್ಲಿ ನಿದ್ರೆ ಮಾಡಿ ಅಲ್ಲಿಯೇ ಧರಣಿ ಮುಂದುವರಿಸಿದ್ದಾರೆ.
‘ಉಸ್ತುವಾರಿ ಸಚಿವ ಡಾ ಶರಣಪ್ರಕಾಶ ಪಾಟೀಲ ಅವರು ನಾವು ಸಭೆಯಲ್ಲಿ ಹಾಗೆ ಹೇಳುತ್ತೇವೆ ನಿಮ್ಮ ನಿಯಮ ನೀವು ಪಾಲಿಸಿ ಎಂದು ಜಿಲ್ಲಾಧಿಕಾರಿಗೆ ಪರೋಕ್ಷವಾಗಿ ಸ್ಥಗಿತಗೊಳಿಸದಂತೆ ಸೂಚಿಸಿದ್ದಾರೆ. ದೇವದುರ್ಗದ ಜನ ತೊಂದರೆ ಅನುಭವಿಸುತ್ತಿದ್ದರೂ ಉಸ್ತುವಾರಿ ಸಚಿವರು ರಾಜಕೀಯ ಮಾಡುತ್ತಿದ್ದಾರೆ‘ ಎಂದು ಶಾಸಕಿ ಆರೋಪಿಸಿದ್ದಾರೆ.
ದೇವದುರ್ಗ ತಾಲ್ಲೂಕಿನ ಕಾಕರಗಲ್ ಟೋಲ್ಗೇಟ್ನಲ್ಲಿ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ ತಮ್ಮ ಬೆಂಬಲಿಗರೊಂದಿಗೆ ಧರಣಿ ನಡೆಸಿದ್ದಾರೆ
ಲೋಕೋಪಯೋಗಿ ಇಲಾಖೆ ಸಚಿವರ ಅಧ್ಯಕ್ಷತೆ ಯಲ್ಲಿ ಜುಲೈ 24ರಂದು ಸಭೆ ನಡೆಸಿ, ಟೋಲ್ ಕೇಂದ್ರ ರದ್ದುಗೊಳಿಸುವ ಬಗ್ಗೆ ಕ್ರಮಕೈಗೊಳ್ಳು ವುದಾಗಿ ರಾಜ್ಯ ಸರ್ಕಾರದಿಂದ ಭರವಸೆ ಸಿಕ್ಕಿದ್ದರಿಂದ ಶನಿವಾರ ಮಧ್ಯಾಹ್ನದ ಬಳಿಕ ಶಾಸಕಿ ಪ್ರತಿಭಟನೆಯನ್ನು ಕೈಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.