ADVERTISEMENT

ರಾಯಚೂರು: ರಕ್ಷಣೆ ಕೋರಿದ ಪ್ರೇಮಿಗಳು

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 13:40 IST
Last Updated 10 ಜನವರಿ 2020, 13:40 IST
ವಿಜಯಲಕ್ಷ್ಮೀ, ಆಂಜೀನಪ್ಪ
ವಿಜಯಲಕ್ಷ್ಮೀ, ಆಂಜೀನಪ್ಪ   

ರಾಯಚೂರು: ಕಿರುತೆರೆ ನಟಿ ವಿಜಯಲಕ್ಷ್ಮೀ ಹಾಗೂ ಸಹ ನಿರ್ದೇಶಕ ಆಂಜಿನಪ್ಪ ಪ್ರೇಮಿಗಳು ನೋಂದಣಿ ಮದುವೆ ಮಾಡಿಕೊಂಡಿರುವುದಾಗಿ ತಿಳಿಸಿದ್ದು, ಪ್ರಾಣಭಯ ಇರುವುದರಿಂದ ರಕ್ಷಣೆ ಒದಗಿಸಬೇಕು ಎಂದು ರಾಯಚೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರಿಗೆ ಈಚೆಗೆ ಮನವಿ ಸಲ್ಲಿಸಿದ್ದಾರೆ.

ಸಿರವಾರ ತಾಲ್ಲೂಕಿನ ಹಳ್ಳಿಹೊಸೂರು ಗ್ರಾಮದಲ್ಲಿ ತನ್ನ ಅಕ್ಕನ ಮನೆಯಲ್ಲಿ ವಿಜಯಲಕ್ಷ್ಮೀಯೊಂದಿಗೆ ಆಂಜಿನಪ್ಪ ಉಳಿದುಕೊಂಡಿದ್ದಾರೆ. ಗಂಗಾವತಿ ತಹಶೀಲ್ದಾರ್‌ ಕಚೇರಿಯಲ್ಲಿ ಪರಸ್ಪರ ಒಪ್ಪಿಕೊಂಡು ನೋಂದಣಿ ಮದುವೆ ಮಾಡಿಕೊಂಡಿದ್ದು, ಇಬ್ಬರನ್ನು ಬೇರ್ಪಡಿಸುವುದಕ್ಕೆ ಮನೆಮಂದಿ ಪ್ರಯತ್ನಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

‘ಯಾವ ನಿರ್ಮಾಪಕರಿಂದಲೂ ಹಣ ಪಡೆದುಕೊಂಡು ಬಂದಿಲ್ಲ. ‘ತುಂಗಭದ್ರಾ’ ಸಿನಿಮಾದಲ್ಲಿ ನಟಿಸುವಾಗ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಇಲ್ಲಿಗೆ ನನ್ನನ್ನು ಯಾರೂ ಕರೆದು ತಂದಿಲ್ಲ. ನಾನೇ ಒಪ್ಪಿಕೊಂಡು ಬಂದಿದ್ದು, ನಮ್ಮಜ್ಜಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ನಮ್ಮ ತಾಯಿ ಕೂಡಾ ಆಸ್ಪತ್ರೆಯಲ್ಲಿ ದಾಖಲಾಗಿ ನಾಟಕ ಮಾಡುತ್ತಿದ್ದಾರೆ’ ಎಂದು ವಿಜಯಲಕ್ಸ್ಮಿ ದೂರಿದ್ದಾರೆ.
‘ಈ ರೀತಿ ವಿಷ ಸೇವಿಸುವುದಾಗಿ ಈ ಮೊದಲು ಕೂಡಾ ತಾಯಿ ನಾಟಕ ಮಾಡಿದ್ದರು. ನನ್ನ ತಂದೆ-ತಾಯಿ ಬೇರ್ಪಟ್ಟು ಆರು ವರ್ಷಗಳಾಗಿದೆ. ಸದ್ಯ ನನ್ನ ತಾಯಿ ಮತ್ತು ಸಾಕು ತಂದೆ ಇದ್ದು, ಸಾಕಷ್ಟು ಕಿರುಕುಳ ನೀಡಿದ್ದಾರೆ. ಚಿತ್ರ-ವಿಚಿತ್ರ ಹಿಂಸೆ ಕೊಟ್ಟಿದ್ದಾರೆ. ನಾನು ಮದುವೆ ಮಾಡಿಕೊಂಡಿರುವ ವಿಷಯ ತಿಳಿದುಕೊಂಡು ನನ್ನ ಗಂಡನನ್ನು ಸಾಯಿಸಲು ಯೋಜನೆ ಮಾಡಿದ್ದಾರೆ’ ಎಂದು ವಿಜಯಲಕ್ಷ್ಮಿ ಅವರು ಹೇಳುತ್ತಿದ್ದಾರೆ.

ADVERTISEMENT

‘ಮನೆಯಿಂದ ಬರುವಾಗ ಯಾವುದೇ ಹಣ ಅಥವಾ ಒಡವೆಯಾಗಲಿ ತೆಗೆದುಕೊಂಡು ಬಂದಿಲ್ಲ. ತಂದೆ–ತಾಯಿ ಹಣದ ದಾಹದಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನೆಮ್ಮದಿಯಿಂದ ಸಿನಿಮಾ ಮಾಡುವುದಕ್ಕೆ ಬಿಡಬೇಕು. ಇದಕ್ಕೆ ಪೊಲೀಸರು ರಕ್ಷಣೆ ಒದಗಿಸಬೇಕು’ ಎಂದು ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.