ಪ್ರಜಾವಾಣಿ ವಾರ್ತೆ
ದೇವಸೂಗೂರು (ಶಕ್ತಿನಗರ): ಗ್ರಾಮದ ಸೂಗೂರೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಶನಿವಾರ ಧಾರ್ಮಿಕ ದಿನಾಚರಣೆ ಹಿನ್ನಲೆ ಗೋಪೂಜೆ, ನಂತರ ಉಳುಮೆ ಮಾಡುವ ನೇಗಿಲು ನೇಗಿಲುಗಳನ್ನು ಹಿಡಿದು ಪೂಜೆ ಮಾಡುವ ಮೂಲಕ ಜಿಲ್ಲಾ ಉಪ ವಿಭಾಗಾಧಿಕಾರಿ ರಜನಿಕಾಂತ್ ಚೌವ್ಹಾಣ್ ಅವರು ಯುಗಾದಿ ಹಬ್ಬ ಆಚರಣೆ ಮಾಡಿದರು
ಸೂಗೂರೇಶ್ವರ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಆರೋಲಿ ಸೂಗಯ್ಯಸ್ವಾಮಿ ಸಾನಿಧ್ಯ ವಹಿಸಿದ್ದರು. ದೇವಸ್ಥಾನದಲ್ಲಿ
ಅಭಿಷೇಕ, ಅಲಂಕಾರ ಪೂಜೆಯೊಂದಿಗೆ ಬೇವು ಬೆಲ್ಲವನ್ನು ವಿತರಿಸಲಾಯಿತು. ಅರ್ಚಕ ನಂದಿಕೋಲು ಸೂಗಯ್ಯ
ಸ್ವಾಮಿ ಅವರು ಪಂಚಾಂಗ ಪಠಣ ಮಾಡಿದರು.
ಜಿಲ್ಲಾ ಉಪವಿಭಾಗಧಿಕಾರಿ ರಜನೀಕಾಂತ್ ಚೌವ್ಹಾಣ್ ಮಾತನಾಡಿ, ‘ಹಿರಿಯರು ಮಾಡಿರುವ ಅನೇಕ ಹಬ್ಬಹರಿದಿನಗಳು ಮತ್ತು ವೈಜ್ಞಾನಿಕ ಹಿನ್ನಲೆಯನ್ನು ಮರೆಯುತ್ತಿದ್ದೇವೆ. ಯುಗಾದಿ ಮೊದಲ ದಿನವೇ ಹೊಸ ವರ್ಷವನ್ನಾಗಿ ಆಚರಿಸಿಕೊಂಡು ಈ ದಿನವನ್ನು ಧಾರ್ಮಿಕ ದಿನವನ್ನಾಗಿ ಆಚರಣೆ ಮಾಡುತ್ತೀದ್ದೇವೆ‘ ಎಂದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ಬಸನಗೌಡ ದದ್ದಲ್ ಅವರು ಸಸಿ ನೆಟ್ಟರು. ನಂತರ ಮಾತನಾಡಿದ ಅವರು, ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ದುರುಗೇಶ, ಸೂಗೂರೇಶ್ವರ ದೇವಸ್ಥಾನದ ಮುಖ್ಯ ಅಧಿಕಾರಿ ಅನಿಲಕುಮಾರ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಮುಖಂಡರು, ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.